ಮೈಸೂರು ಇನ್ಸ್ಪೆಕ್ಟರ್ ಜಬರದಸ್ತು , ಜಾವಗಲ್ ಶ್ರೀನಾಥ್ ಸುಸ್ತು
ಮೈಸೂರು : ‘ಯಾರ್ರೀ ನೀವು? ಹಂಗೆಲ್ಲಾ ಸುಮ್ಮನೇ ಕಂಪ್ಲೇಂಟ್ ಬರ್ಕೊಳ್ಳಕಾಗಲ್ಲ. ಹೋಗಿ, ಅಫಿಡವಿಟ್ ಮಾಡಿಸ್ಕೊಂಡು ಬನ್ನಿ’- ಕುವೆಂಪು ನಗರದ ಪೊಲೀಸ್ ಇನ್ಸ್ಪೆಕ್ಟರ್ ರಾಜೇಂದ್ರ ಪ್ರಸಾದ್, ಜಾವಗಲ್ ಶ್ರೀನಾಥ್ ಅವರಿಗೆ ನಿರ್ದಾಕ್ಷಿಣ್ಯವಾಗಿ ಹೇಳಿದ ಮಾತಿದು.
ಇನ್ಸ್ಪೆಕ್ಟರ್ ವರ್ತನೆ ಕಂಡು ಶ್ರೀನಾಥ್ ದಂಗು. ತಮ್ಮ ಪರಿಚಯ ಇಲ್ಲದೆ ಹೀಗೆ ಮಾತಾಡುತ್ತಿರಬೇಕೆಂದು, ಶ್ರೀನಾಥ್ ತಾವು ಯಾರು ಅಂತ ಹೇಳಿಕೊಂಡರು. ರಾಜೇಂದ್ರ ಪ್ರಸಾದ್ ಕರಗುವ ಬದಲು ಇನ್ನಷ್ಟು ಖಾರವಾದರು. ನೀವು ಕ್ರಿಕೆಟ್ಟಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಏನೂ ಮಾಡೋಕ್ಕಾಗಲ್ಲ. ಅಫಡವಿಟ್ ತರಲೇಬೇಕು ಅಂತ ಪಟ್ಟು ಹಿಡಿದರು. ಕೊನೆಗೆ ಹತಾಶರಾಗಿ ಶ್ರೀನಾಥ್ ಹೊರಗೆ ಹೋಗಬೇಕು ಅನ್ನುವಷ್ಟರಲ್ಲಿ, ಠಾಣೆಯ ಇತರರು ಹಾಗೂ ಉನ್ನತ ಪೊಲೀಸ್ ಅಧಿಕಾರಿ ದೂರು ದಾಖಲಿಸಿಕೊಂಡರು.
ತಮ್ಮ ವಾಹನದ ನೋಂದಣಿ ಪ್ರಮಾಣ ಪತ್ರ ಕಳೆದುಹೋಗಿದ್ದಕ್ಕೆ ಶ್ರೀನಾಥ್ ದೂರು ಕೊಡಲೆಂದು ಶನಿವಾರ ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ ಮರಳಿದಾಗ ಶ್ರೀನಾಥ್ ಮುಖ ಬಾಡಿತ್ತು. ರಾಜೇಂದ್ರ ಪ್ರಸಾದ್ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಶ್ರೀನಾಥ್ ಅವರನ್ನು ಗುರುತಿಸುವುದಿರಲಿ, ಕುಳಿತುಕೊಳ್ಳಿ ಅಂತಲೂ ಹೇಳಲಿಲ್ಲ.
ಈ ಪ್ರಕರಣಕ್ಕೆ ರೆಕ್ಕೆ ಪುಕ್ಕ ಬೆಳೆದು, ಪೊಲೀಸ್ ಇಲಾಖೆಗೇ ಕೆಟ್ಟ ಹೆಸರು ಬರುತ್ತದೆಂದು ಎಸಿಪಿ ಡಿ.ರಾಮಕೃಷ್ಣ ಖುದ್ದು ಶ್ರೀನಾಥ್ ಮನೆಗೆ ಹೋಗಿ ಕ್ಷಮೆಯಾಚಿಸಿದ್ದಾರೆ ಎಂಬ ಸುದ್ದಿಯೂ ಇದೆ.
ರಾಜೇಂದ್ರ ಪ್ರಸಾದ್ ಕಿರಿಕ್ಕಿಗೆ ಹೆಸರುವಾಸಿ. ಈ ಹಿಂದೆ ಪ್ರೊಬೆಷನರಿ ಅವಧಿಯಲ್ಲಿ ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಕರೆತಂದು ವಿಚಾರಣೆ ನಡೆಸಿದ್ದರು. ಅನೇಕ ಸಂಘಟನೆಗಳು ಇದನ್ನು ಖಂಡಿಸಿದ್ದ ಕಾರಣ ಪ್ರಸಾದ್ ಅವರನ್ನು ಅಮಾನತ್ತುಗೊಳಿಸಲಾಗಿತ್ತು. ಕಾನೂನಿನ ಪ್ರಕಾರ ವಾಹನ ನೋಂದಣಿ ಪ್ರಮಾಣ ಪತ್ರದ ಕಳವಿನ ದೂರು ದಾಖಲಿಸಿಕೊಳ್ಳಲು ಅಫಿಡವಿಟ್ ಬೇಕಿಲ್ಲ.
ಪ್ರಸಾದ್ ಸುಖಾ ಸುಮ್ಮನೆ ಶ್ರೀನಾಥ್ಗೆ ಅವಮಾನ ಮಾಡಿದರು. ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದ ನಂತರ ಶ್ರೀನಾಥ್ ಟೈಮೇ ಸರಿಯಿಲ್ಲ. ಒಂಡೇ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಈಗ ನೋಡಿದರೆ, ಇಂಥಾ ಅವಮಾನ. ಪಾಪ, ಶ್ರೀನಾಥ್ !
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...