ಬೂದಿ ಸ್ವಾಮಿ ಬೋಗಸ್ ಅಂತ ಗೊತ್ತಾದದ್ದೇ ವರ್ಷದ ನಂತರ !
*(ಇನ್ಫೋ ಇನ್ಸೈಟ್)
ಉಡುಪಿ : ಬಂದೂಕು ಇಟ್ಟು ಸುಲಿಯೋದು ಮಾಮೂಲಾಗಿರುವ ಈ ಮಿಸೈಲ್ ಜಮಾನದಲ್ಲೂ ಬೂದಿ ಕೊಟ್ಟು ದೋಚೋರಿಗೆ ಕೊರೆಯಿಲ್ಲ. ಮದ್ದು, ಮಾಟ, ಯಂತ್ರ- ಮಂತ್ರ- ತಂತ್ರ ಇವೆಲ್ಲಾ ನಂಬಿಕೆಗಳ ನಡುವೆ ಬೋಗಸ್ ಸ್ವಾಮಿಗಳ ಆವುಟ ಇನ್ನೂ ಇದೆ ಅನ್ನುವುದೇ ನಮ್ಮ ಜನರ ಮೌಢ್ಯಕ್ಕೆ ಹಿಡಿದ ಕನ್ನಡಿ.
ಜನರ ಮೌಢ್ಯ ಏನೆಲ್ಲಾ ಅವಘಡಗಳಿಗೆ ಕಾರಣವಾಗುತ್ತದೆ ಅನ್ನೋದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ-
ಒಂದು ವರ್ಷದ ಹಿಂದೆ ಅಲವೂರು ಗ್ರಾಮದ ದೇಶಿಂಬೆಟ್ಟು ಕಾಡಿನಲ್ಲಿ ಒಬ್ಬ ದೇವತಾ ಮನುಷ್ಯ ಪ್ರತ್ಯಕ್ಷನಾದ ! ಆತನೇ ಹೇಳಿಕೊಂಡಂತೆ ಹೆಸರು ರವಿ ಸ್ವಾಮಿ. ನಿಜನಾಮ ರವಿ ಸೆರಿಗಾರ್.
ಮಂಗಳೂರಿನ ಮರಿಯಡ್ಕದ ಆದಿ ಪರಾಶಕ್ತಿ ಕ್ಷೇತ್ರದ ನರೇಂದ್ರನಾಥ ಸ್ವಾಮಿಯ ಶಿಷ್ಯ ತಾನೆಂದು ಹೇಳಿಕೊಂಡು ಒಂದು ಗುಡಿಸಲು ಕಟ್ಟಿಕೊಂಡ. ಬೂದಿ ಕೊಟ್ಟ. ಇಸಿದುಕೊಂಡವ ಕೆಟ್ಟ. ಆದರೂ, ಒಳ್ಳೆಯದಾದವರು ಇವನ ಮಹಿಮೆಯಿಂದಲೇ ಆದದ್ದೆಂದು ತಿಳಿದರು. ರವಿ ಸ್ವಾಮಿಯ ಆರಾಧನೆ ಹೆಚ್ಚಾಯಿತು. ಗುಡಿಸಲು ಆಶ್ರಮವಾಯಿತು. ನೋಡನೋಡುತ್ತಲೇ ರವಿ ಸ್ವಾಮಿ ದೇವತಾ ಮನುಷ್ಯನಾದ.
ಹೆಂಗಸರು ಕಾಣೆಯಾಗತೊಡಗಿದರು. ಮಕ್ಕಳು ದಿನಗಟ್ಟಲೆ ಮರೆಯಾಗತೊಡಗಿದರು. ಎಲ್ಲರಿಗೂ ರವಿ ಸ್ವಾಮಿಯ ಆಶ್ರಮದಲ್ಲಿ ಗುಪ್ತ ಸೇವೆ ! ಅದೇನು ಮಾಡುತ್ತಿದ್ದನೋ ಜನರಿಗೆ ಮಾತ್ರ ತಿಳಿಯುತ್ತಿರಲಿಲ್ಲ. ಗುಪ್ತ ಸೇವೆ ಚಾಳಿಯಾಗಿ ಬದಲಾದಾಗ ಜನರಿಗೆ ಅನುಮಾನ ಶುರುವಾಯಿತು. ಒಂದೊಂದೇ ದನಿ ಎದ್ದಿತು. ಸಂಘಟನೆಗಳಿಗೆ ಮುಟ್ಟಿತು. ಇವನ ಗುಪ್ತ ಸೇವೆಯನ್ನು ಗಮನಿಸಿದ ಸಂಘಟನೆಗಳು ಬೇಸ್ತು ಬಿದ್ದವು. ಕೋಣೆಗಳಲ್ಲಿ ಕೂಡಿಹಾಕಿ ಹೆಂಗಸರು ಮಕ್ಕಳೆನ್ನದೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಈ ದೇವತಾ ಮನುಷ್ಯ.
ಹಿಂದೂ ಯುವ ಸೇನೆಯಾಡನೆ ಇನ್ನೂ ಹಲವು ಸಂಘಟನೆಗಳು ಸೇರಿಕೊಂಡು ರವಿ ಸ್ವಾಮಿಯ ಆಶ್ರಮದ ಮೇಲೆ ಒಮ್ಮಿಂದೊಮ್ಮೆಗೇ ದಾಳಿಯಿಟ್ಟವು. ಆಶ್ರಮವನ್ನು ಚಿಂದಿ ಉಡಾಯಿಸಿದವು. ಪ್ರಾಣವನ್ನು ಕೈಲಿ ಹಿಡಿದುಕೊಂಡು ರವಿ ಸ್ವಾಮಿ ಪೇರಿ ಕಿತ್ತ. ಈತ ನರೇಂದ್ರನಾಥ ಸ್ವಾಮಿಯ ಶಿಷ್ಯನೇ ಅಲ್ಲ ಎಂಬುದು ಜನಕ್ಕೆ ಗೊತ್ತಾಗಿದ್ದು ಆಮೇಲೆ.
ಪೊಲೀಸರಿಗೆ ದೂರು ಮುಟ್ಟಿದ್ದು, ರವಿ ಸ್ವಾಮಿಯ ಶೋಧ ನಡೆದಿದೆ. ಅಂದಹಾಗೆ, ಈತನಿಗೆ ಕುಮ್ಮಕ್ಕು ಕೊಡುತ್ತಿದ್ದ ಸೋದರ ಗಂಗಾಧರ ಎಂಬುವನೂ ನಾಪತ್ತೆಯಾಗಿದ್ದಾನೆ. ಇಂಥಾ ಬೋಗಸ್ ಬೂದಿ ಸ್ವಾಮಿಗಳ ಕಂಡರೆ ಇನ್ನು ಮುಂದಾದರೂ ಜನ ಮೊದಲೇ ಶಾಸ್ತಿ ಮಾಡುವ ಮನಸ್ಸು ಮಾಡಲಿ. ಏನಂತೀರಿ?
ಮುಖಪುಟ / ಇವತ್ತು... ಈ ಹೊತ್ತು...