ಅಯೋಧ್ಯೆ ವಿವಾದ ಕೋರ್ಟಿನಾಚೆ ಇತ್ಯರ್ಥವಾಗಲಿ- ಪೇಜಾವರ ಶ್ರೀ
ನವದೆಹಲಿ: ಅಯೋಧ್ಯೆಯ ರಾಮಮಂದಿರ ವಿವಾದವನ್ನು ನ್ಯಾಯಮಂದಿರದ ಹೊರಗೆ ಬಗೆಹರಿಸಿಕೊಳ್ಳುವುದು ಉಚಿತ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ಅಭಿಪ್ರಾಯಪಟ್ಟಿದ್ದಾರೆ.
ಮಾತುಕತೆಯ ಮೂಲಕ ರಾಮಮಂದಿರ ವಿವಾದವನ್ನು ಬಗೆಹರಿಸಲು ಕೇಂದ್ರ ಸರಕಾರ ಅವಕಾಶ ಮಾಡಿಕೊಡಬೇಕು ಎಂದು ವಿಶ್ವೇಶ ತೀರ್ಥ ಸ್ವಾಮೀಜಿ ಪ್ರಧಾನಿ ವಾಜಪೇಯಿ ಅವರನ್ನು ಆಗ್ರಹಿಸಿದ್ದಾರೆ. ನ್ಯಾಯಾಲಯದ ತೀರ್ಪಿನಿಂದ ಹಿಂದೂ ಧರ್ಮೀಯರು ಹಾಗೂ ಮುಸ್ಲಿಂ ಮತದವರನ್ನು ತೃಪ್ತಿಪಡಿಸುವುದು ಸಾಧ್ಯವಾಗುವುದಿಲ್ಲ. ಇದರಿಂದ ಮತ್ತಷ್ಟು ಬಿಕ್ಕಟ್ಟು ಹೆಚ್ಚಾಗುತ್ತದೆ. ವಿರಸ ಮುಂದುವರೆಯುತ್ತದೆ. ಆದ್ದರಿಂದ ಚರ್ಚೆಯಾಂದೇ ಇದಕ್ಕೆ ಪರಿಹಾರ ಎಂದು ಸ್ವಾಮೀಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ವಿವಾದಿತ ಭೂಮಿಯಿಂದ ಸಾಕಷ್ಟು ದೂರದಲ್ಲಿರುವ ವಿವಾದ ರಹಿತ ಸ್ಥಳದಲ್ಲಿ ಮಂದಿರ ನಿರ್ಮಾಣ ಕಾರ್ಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ. ಇದರಿಂದ ಕೇಂದ್ರ ಸರಕಾರಕ್ಕೆ ಕಾನೂನಿನ ಅಡ್ಡಿಯೇನೂ ಇರುವುದಿಲ್ಲ. ಹಲವು ಮಂದಿ ನಿವೃತ್ತ ನ್ಯಾಯಾಧೀಶರ ಬಳಿ ಚರ್ಚಿಸಿದ್ದೇನೆ. ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸ್ವಾಮೀಜಿ ನುಡಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...