ಪ್ರಧಾನಿಯಿಂದ ದೇಶಕ್ಕೆ ಇನ್ಸ್ಯಾಟ್ 3ಸಿ ಉಪಗ್ರಹ ಅರ್ಪಣೆ
ನವದೆಹಲಿ : ಇನ್ಸ್ಯಾಟ್ 3ಸಿ ಉಪಗ್ರಹವನ್ನು ಬುಧವಾರ ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಎ.ಬಿ.ವಾಜಪೇಯಿ, ಬಾಹ್ಯಾಕಾಶ ತಂತ್ರಜ್ಞಾನದಿಂದ ದೇಶ ಜಾಗತಿಕ ಮಟ್ಟದಲ್ಲಿ ಉನ್ನತಿ ಸಾಧಿಸಲು ನೆರವಾಗಲಿದೆ ಎಂದರು.
ಬಾಹ್ಯಾಕಾಶ ತಂತ್ರಜ್ಞಾನದ ಯಶಸ್ವಿ ಬಳಕೆಯಾಗಬೇಕು. ಮಿಲಿಟರಿ ಶಕ್ತಿಯ ಮೂಲಕವಲ್ಲ ; ಆರ್ಥಿಕ ಅಭಿವೃದ್ಧಿಯಿಂದ. ಈ ತಂತ್ರಜ್ಞಾನದ ವಿವಿಧ ಅವಕಾಶಗಳನ್ನು ಹುಡುಕುತ್ತಾ, ಆ ಮೂಲಕ ಪ್ರಗತಿ ಸಾಧಿಸಬೇಕಿದೆ ಎಂದು ಪ್ರಧಾನಿ ಕರೆ ಕೊಟ್ಟರು.
ವಿದೇಶೀ ತಂತ್ರಗಳನ್ನು ಬಾಹ್ಯಾಕಾಶ ವಿಜ್ಞಾನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂಬ ಜಿಜ್ಞಾಸೆಯೇ ನಮ್ಮ ವಿಜ್ಞಾನಿಗಳು ಹೊಸತನ್ನು ಹುಡುಕಲು ಅನುವು ಮಾಡಿಕೊಟ್ಟಿದೆ. ಅದರಿಂದಾಗಿ ಭಾರತ ಕೂಡ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕಡಿಮೆಯಿಲ್ಲ ಎಂಬುದನ್ನು ಜಗತ್ತಿಗೆ ಸಾಬೀತು ಮಾಡಿ ತೋರಿಸಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆ ಸ್ಮರಣೀಯ ಎಂದು ಶ್ಲಾಘಿಸಿದರು.
ಬಲು ದೂರವನ್ನು ಗ್ರಹಿಸುವ ಸಾಮರ್ಥ್ಯವಿರುವ ನಾಲ್ಕನೇ ತಲೆಮಾರಿನ ಇನ್ಸ್ಯಾಟ್ ಉಪಗ್ರಹ ವ್ಯವಸ್ಥೆಯ ಅಭಿವೃದ್ಧಿ ನಮ್ಮ ಮುಂದಿನ ಗುರಿ. ಅದಕ್ಕೆ ಬೇಕಾದ ಸಕಲ ಬೆಂಬಲವನ್ನೂ ನಮ್ಮ ವಿಜ್ಞಾನಿಗಳಿಗೆ ಸರ್ಕಾರ ಕೊಡಲಿದೆ ಎಂದು ವಾಜಪೇಯಿ ಭರವಸೆ ಕೊಟ್ಟರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...