ಮಧ್ಯ ಪ್ರದೇಶದಲ್ಲಿ ಪ್ರೇಮಲತಾ ಎಂಬ ಅಭಿನವ ಮೀರಾಬಾಯಿ !
ಚೆನ್ನಮಲ್ಲಿಕಾರ್ಜುನನ್ನೇ ಗಂಡನೆಂದುಕೊಂಡು ದಿಕ್ಕುಗಳನ್ನೇ ಬಟ್ಟೆಗಳನ್ನಾಗಿಸಿಕೊಂಡು ಕಾಡು ಮೇಡಿಗೆ ಹೊರಟ ಅಕ್ಕ, ಗಿರಿಧರನ ಸಂಗಾತ ಬಯಸಿ ಮನ ಮೀಟಿದ ಮೀರಾಬಾಯಿ- ಓದಿಯೋ ಕೇಳಿಯೋ ಗೊತ್ತು. ಇವತ್ತಿನ ನ್ಯೂಕ್ಲಿಯಾರ್ ಜಗತ್ತಿನಲ್ಲೂ ‘ಅಭಿನವ ಮೀರಾ’ ಇದ್ದಾಳೆ ಅಂದರೆ ನಂಬುವಿರಾ?
ಮಧ್ಯ ಪ್ರದೇಶದ ಪೊಲೀಸರೂ ಮೊದಲು ನಂಬಲಿಲ್ಲ. ಆದರೆ ಪ್ರೇಮಲತಾ ಎಂಬ ಹಟಮಾರಿಯನ್ನು ಕಂಡ ನಂತರ ನಂಬಲೇ ಬೇಕಾಯಿತು. ಅವರ ಬುದ್ಧಿಮಾತು ನೀರಲ್ಲಿ ತೊಳೆದ ಹುಣಿಸೆ ಹಣ್ಣಿನಂತಾಯಿತು.
ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ 23ರ ಹರೆಯದ ಪ್ರೇಮಲತಾ ಮಾಮೂಲಿ ಹುಡುಗಿಯರಂತೆಯೇ ಇದ್ದವಳು. ಅದೇನಾಯಿತೋ ಏನೋ, ಎರಡು ತಿಂಗಳ ಹಿಂದೆ ‘ನಾನು ನನ್ನ ಜೀವನವನ್ನು ಕೃಷ್ಣನಿಗೆ ಮುಡಿಪಾಗಿಡುತ್ತೇನೆ’ ಅಂದಳು.
ಎಲ್ಲರಂತೆಯೇ ಈಕೆಯ ಅಪ್ಪ ‘ಯಾವನೇ ಅವನು ಕೃಷ್ಣ’ ಅಂತ ತರಾಟೆಗೆ ತೆಗೆದುಕೊಂಡರು. ಪ್ರೇಮಲತಾ ತಣ್ಣಗೆ ಹೇಳಿದಳು- ‘ಭಗವಾನ್ ಕೃಷ್ಣ’. ಅಪ್ಪ ನಿಮಿಷ ಕಾಲ ಸ್ತಂಭೀಭೂತರಾದರು. ಆಮೇಲೆ ಎಚ್ಚೆತ್ತುಕೊಂಡು ಬುದ್ಧಿ ಹೇಳಿದರು, ಗದರಿದರು, ಮಗಳಿಗೆ ಹತ್ತಿರಾಗಿದ್ದವರ ಕೈಲಿ ಪರಿಪರಿಯಾಗಿ ಹೇಳಿಸಿದರು. ಉಹ್ಞೂಂ, ಏನು ಮಾಡಿದರೂ ಫಲವಾಗಲಿಲ್ಲ. ‘ನನ್ನ ಗಂಡ ಕೃಷ್ಣ’ ಅಂತ ಪಟ್ಟು ಹಿಡಿದು ಕುಂತ ಪ್ರೇಮಲತಾ ಲಾತಾ ಕೊಟ್ಟರೂ ಜಗ್ಗಲಿಲ್ಲ.
ಹಾಗೆ ಹೇಳಿಕೊಂಡು ಈಕೆ ಸುಮ್ಮನೆ ಕೂರಲಿಲ್ಲ. ಯಾವುದೋ ಅರ್ಚಕರನ್ನು ಹಿಡಿದು, ಸಾಂಪ್ರದಾಯಿಕ ರೀತಿಯಲ್ಲಿ ಮಂತ್ರಘೋಷಗಳ ನಡುವೆ ಚಿತ್ರಕೂಟದ ಸತಿ ಅನಸೂಯ ಆಶ್ರಮದಲ್ಲಿ ಕಳೆದ ವಾರ ಕೃಷ್ಣನ ಜೊತೆ ವಿವಾಹವಾಗೇ ಬಿಟ್ಟಳು. ಕೃಷ್ಣನ ರೂಪದ ಮೂರ್ತಿಗೆ ತನ್ನನ್ನು ಅರ್ಪಿಸಿಕೊಂಡಳು !
ಏನು ಮಾಡಿದರೂ ಜಗ್ಗದ ಅಪ್ಪ- ಅಮ್ಮ ಕೊನೆಗೆ ಮಗಳ ಹಟಕ್ಕೆ ಮಣಿಯಲೇಬೇಕಾಯಿತು. ಇದನ್ನು ಭಕ್ತಿ ಪಂಥದ ಮತ್ತೊಂದು ಅಧ್ಯಾಯ ಅಂತ ಹೇಳುವಿರೋ, ಹುಚ್ಚುತನದ ಪರಮಾವಧಿ ಎನ್ನುವಿರೋ, ಮಾಧುರ್ಯ ಭಕ್ತಿ ಎಂದು ನಂಬುವಿರೋ. ಅದು ನಿಮಗೆ ಬಿಟ್ಟದ್ದು.
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ