ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡದ ಕರ್ನಾಟಕ ವಿವಿ ಅಂಗಳದಲ್ಲಿ ಪೊಲೀಸ್‌ ರಂಗು !

By Oneindia Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

ಧಾರವಾಡ : ವಿಶ್ವವಿದ್ಯಾಲಯಗಳಿಗೆ ಐಪಿಎಸ್‌ ಅಧಿಕಾರಿಗಳನ್ನು ರಿಜಿಸ್ಟ್ರಾರ್‌ ಆಗಿ ನೇಮಕ ಮಾಡುವ ಸರಕಾರದ ಕ್ರಮ ಶಿಕ್ಷಣ ಕ್ಷೇತ್ರದಲ್ಲಿ ಆಶ್ಚರ್ಯ ಮೂಡಿಸಿದೆ.

ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಐಪಿಎಸ್‌ ಅಧಿಕಾರಿ ವೈ. ಆರ್‌. ಪಾಟೀಲ್‌ ರಿಜಿಸ್ಟ್ರಾರ್‌ ಆಗಿ ಅಧಿಕಾರಿ ವಹಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಐಪಿಎಸ್‌ ಅಧಿಕಾರಿಗಳ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂದು ಮುಖ್ಯಮಂತ್ರಿ ಕೃಷ್ಣ ಅಲವತ್ತುಕೊಂಡ ಬೆನ್ನಿಗೇ ಈ ನೇಮಕ ನಡೆದಿರುವುದು ಗಮನಾರ್ಹ.

ವೈ. ಆರ್‌. ಪಾಟೀಲರ ನೇಮಕದಿಂದಾಗಿ, ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಬರಬೇಕಿದ್ದ ಬಾಕಿ ಹಣದ ವಿಷಯ ವಿಲೇವಾರಿಯಾಗುತ್ತಿದೆ. 1.36 ಕೋಟಿ ರೂಪಾಯಿ ಹಣದಲ್ಲಿ ಈಗಾಗಲೇ ವಿವಿಗೆ ಬರಬೇಕಿದ್ದ 75 ಲಕ್ಷ ರೂಪಾಯಿಗಳು ವಾಪಾಸು ಬಂದಿವೆ. ವಿವಿಯ ಉದ್ಯೋಗಿಗಳೂ ಸೇರಿದಂತೆ ಸಾಲ ತೆಗೆದುಕೊಂಡವರು ಈಗ ಐಪಿಎಸ್‌ ಅಧಿಕಾರಿ ಸೀಟಿನಲ್ಲಿ ಕುಳಿತಿರುವುದನ್ನು ಕಂಡು ಸಾಲ ವಾಪಾಸು ಮಾಡುತ್ತಿದ್ದಾರೆ.

ಸಾಲದ ವ್ಯವಹಾರ ಇತ್ಯರ್ಥವಾದ ನಂತರ ಪಾಟೀಲರು ವಿವಿಯ ಪ್ರಕಾಶನ ವಿಭಾಗವಾದ ಪ್ರಸಾರಾಂಗದ ಕಡೆ ಗಮನ ಕೊಡಲಿದ್ದಾರೆ. ಪ್ರಸಾರಾಂಗವು, ಸುಮಾರು 91 ಸಾವಿರ ರೂಪಾಯಿ ಬೆಲೆ ಪುಸ್ತಕಗಳ ಬಗ್ಗೆ ಲೆಕ್ಕ ಪತ್ರ ಒದಗಿಸಿಲ್ಲ.

ವಿವಿಯ ಉದ್ಯಾನವನ, ಇಂಜಿನಿಯರಿಂಗ್‌ ವಿಭಾಗಗಳತ್ತಲೂ ರಿಜಿಸ್ಟ್ರಾರರು ತಲೆ ಹಾಕಿದ್ದಾರೆ. ವಿವಿಯ ಸ್ವರ್ಣ ಉತ್ಸವ ಕಟ್ಟಡಕ್ಕೆ ಎ ಗ್ರೇಡ್‌ನ ಕಚ್ಚಾವಸ್ತುಗಳನ್ನು ಬಳಸುವುದಾಗಿ ಒಪ್ಪಂದವಾಗಿದ್ದರೂ, ಕಳಪೆ ಸಾಮಗ್ರಿಯನ್ನು ಉಪಯೋಗಿಸುತ್ತಿರುವುದೂ ರಿಜಿಸ್ಟ್ರಾರರ ಗಮನಕ್ಕೆ ಬಂದಿದೆ.

ಕರ್ನಾಟಕ ವಿವಿಗೆ ಕಾಯಕಲ್ಪ
ವಿಶ್ವ ವಿದ್ಯಾಲಯದ ಉದ್ಯಾನವನವನ್ನಂತೂ ಕೇಳುವವರೇ ಇಲ್ಲ. ವಿವಿ ಆವರಣದಲ್ಲಿ ಬಯೋ ಡೈವರ್ಸಿಟಿ ಪಾರ್ಕ್‌ ನಿರ್ಮಿಸುವ ಯೋಚನೆ ಪಾಟೀಲರಿಗಿದೆ. ನೀಲಗಿರಿ ಮರಗಳನ್ನು ಕಿತ್ತು ಹಾಕಿ, ಉಪಯುಕ್ತ ಮರಗಳನ್ನು ನೆಡಲಾಗುವುದು ಎಂದು ಪಾಟೀಲರು ಹೇಳಿದ್ದಾರೆ.

ಈ ನಡುವೆ ವಿವಿಯ ಉದಯ ಹಾಸ್ಟೆಲ್‌ ಬಳಿಯಿರುವ ಜಾಗವನ್ನು ಮಾರಾಟ ಮಾಡಿದ್ದು, ಸರಕಾರದ ಅನುಮತಿಯಿಲ್ಲದೆಯೇ ಈ ವ್ಯವಹಾರ ನಡೆದಿದೆ ಎಂಬ ತಕರಾರು ಇದೆ. ವಿವಿಗೆ ಆವರಣ ಗೋಡೆಯೂ ಇಲ್ಲದಿರುವುದರಿಂದ ಇತರರು ವಿವಿಯ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. 749 ಎಕರೆ ಪ್ರದೇಶವನ್ನು ವಿವಿಯ ಆವರಣವನ್ನಾಗಿ ರೂಪಿಸುವ ಕನಸು ಪಾಟೀಲರದು. ವಿವಿಯ ರಕ್ಷಣಾ ವ್ಯವಸ್ಥೆಯೂ ಅಷ್ಟೇ ಕೆಟ್ಟದಾಗಿದೆ. ‘ನಾನು ಎಲ್ಲವನ್ನು ಸರಿಪಡಿಸಬೇಕು ಎಂಬ ಆಸೆಯಿಟ್ಟುಕೊಂಡಿದ್ದೇನೆ. ಪ್ರಯತ್ನವಷ್ಟೇ ನನ್ನದು’ ಎಂದು ಪಾಟೀಲರು ಹೇಳುತ್ತಾರೆ.

ಹೆಚ್ಚುವರಿ ಖರ್ಚುಗಳಿಲ್ಲದೆಯೇ ಚೆನ್ನೈಯ ಅನ್ನಾ ವಿಶ್ವವಿದ್ಯಾಲಯದ ಆವರಣವನ್ನು ತುಂಬಾ ಚೆನ್ನಾಗಿಟ್ಟುಕೊಂಡಿರುವುದನ್ನು ಪಾಟೀಲರು ಇತ್ತೀಚಿನ ತಮ್ಮ ಭೇಟಿಯಲ್ಲಿ ಗಮನಿಸಿದ್ದಾರೆ. ಆವರಣದಲ್ಲಿ ಕುಡಿಯುವ ನೀರು, ನೀರು ಹರಿದುಹೋಗಲು ವ್ಯವಸ್ಥೆ ಸಾಕಷ್ಟು ವಿದ್ಯುತ್‌ ದೀಪಗಳು.. ಸಾಲು ಸಾಲು ಕೆಲಸಗಳು ಬಾಕಿಯಿವೆ. ಎಲ್ಲವನ್ನೂ ತಮ್ಮ ಉಸ್ತುವಾರಿಯಲ್ಲಿ ಸರಿಪಡಿಸುವ ಆಸೆ ಐಪಿಎಸ್‌ ಅಧಿಕಾರಿ, ವಿವಿ ರಿಜಿಸ್ಟ್ರಾರ್‌ ಪಾಟೀರದು !

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X