‘ಪ್ರಾದೇ-ಶಿ-ಕ ಸಮತೋಲನ’ಕ್ಕಾಗಿ16 ಸಾವಿರ ಕೋಟಿ ರು.ಯೋಜನೆ
ಬೆಂಗಳೂರು : ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿಯು 16 ಸಾವಿರ ಕೋಟಿ ರುಪಾಯಿಗಳ 8 ವರ್ಷ ಅವಧಿಯ ಬೃಹತ್ ಯೋಜನೆಯಾಂದಕ್ಕೆ ಶಿಫಾರಸ್ಸು ಮಾಡಿದೆ.
ಸಮಿತಿಯ ಮುಖ್ಯಸ್ಥ ಅರ್ಥ ಶಾಸ್ತ್ರಜ್ಞ ಡಿ.ಎಂ.ನಜುಂಡಪ್ಪ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರಿಗೆ ಮಂಗಳವಾರ ಶಿಫಾರಸ್ಸುಗಳನ್ನು ಸಲ್ಲಿಸಿದರು. ಹೈದರಾಬಾದ್ ಕರ್ನಾಟಕ, ಮಲೆನಾಡು ಪ್ರದೇಶ ಮತ್ತು ಬಯಲುಸೀಮೆ- ಮುಂತಾದ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗಳನ್ನು ರದ್ದು ಪಡಿಸುವುದೂ ಸೇರಿದಂತೆ 44 ವಿಶಾಲ ವ್ಯಾಪ್ತಿಯ ಶಿಫಾರಸ್ಸುಗಳನ್ನು ಸಮಿತಿ ಮಾಡಿದೆ. ಸಮಿತಿಯು ಶಿಫಾರಸ್ಸು ಮಾಡಿರುವ ಬೃಹತ್ ಯೋಜನೆಯ ವ್ಯಾಪ್ತಿಗೆ 114 ಹಿಂದುಳಿದ ತಾಲ್ಲೂಕುಗಳು ಸೇರಿವೆ.
ವರದಿಯನ್ನು ಸ್ವೀಕರಿಸಿದ ನಂತರ ಮಾತಾಡಿದ ಮುಖ್ಯಮಂತ್ರಿ ಕೃಷ್ಣ, ಈ ವರದಿಯ ವೈಜ್ಞಾನಿಕ ಪರಿಶೀಲನೆಯ ನಂತರ ಅವನ್ನು ಅನುಷ್ಠಾನಕ್ಕೆ ತರುವ ಕುರಿತು ಯೋಚಿಸುವುದಾಗಿ ಹೇಳಿದರು.
ಉತ್ತರ ಕರ್ನಾಟಕದ 59 ಮತ್ತು ದಕ್ಷಿಣ ಕರ್ನಾಟಕದ 55 ತಾಲ್ಲೂಕುಗಳನ್ನು ತೀರಾ ಹಿಂದುಳಿದವು ಎಂದು ಗುರ್ತಿಸಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು 1956ರಿಂದ 2000ದ ಅವಧಿಯಲ್ಲಿ ಹೆಚ್ಚು ಉತ್ಪಾದನೆ ಕಂಡಿದ್ದರೂ, ತಲಾದಾಯವು ದಕ್ಷಿಣ ಜಿಲ್ಲೆಗಳಿಗಿಂತ ಕಡಿಮೆ ಇದೆ. ನಿಧಿಗಳನ್ನು ಎಲ್ಲಾ ಪ್ರದೇಶಗಳಿಗೂ ಸಮವಾಗಿ ಹಂಚುವುದು ತರವಲ್ಲ. ಹಿಂದುಳಿದ ಪ್ರದೇಶಗಳಿಗೆ ಹೆಚ್ಚು ಹಣ ಬಿಡುಗಡೆಯಾಗಬೇಕು ಎಂದು ನಂಜುಂಡಪ್ಪ ತಮ್ಮ ವರದಿಯ ತಿರುಳಿನ ಕೆಲ ಭಾಗವನ್ನು ತಿಳಿಸಿದರು.
ನೀರಾವರಿಗೆ ಒದಗಿಸುವ ನೀರಿನ ಮೇಲೆ ಶುಲ್ಕ ಹಾಗೂ ಕೃಷಿ ಬಳಕೆಯ ವಿದ್ಯುತ್ ಮೇಲೆ ದರ ವಿಧಿಸುವುದು ಮತ್ತು ನಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆತದಿಂದ ತೆರಿಗೆಯಲ್ಲದ ಆದಾಯ ಮೂಲಗಳನ್ನು ಸೃಷ್ಟಿಸಿಕೊಳ್ಳುವಂತೆ ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...