‘ದೇವೇಗೌಡರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗುವ ಅರ್ಹತೆಯೂ ಇಲ್ಲ’
ದಾವಣಗೆರೆ : ‘ಗ್ರಾಮ ಪಂಚಾಯಿತಿ ಅಧ್ಯಕ್ಷರಾಗುವ ಅರ್ಹತೆಯಿಲ್ಲದವರೂ ಕೂಡ ದೇಶದ ಪ್ರಧಾನಮಂತ್ರಿಗಳಾಗುತ್ತಾರೆ. ಇದು ವಿಪರ್ಯಾಸದ ವಿಷಯ’. ಬಿಜೆಪಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಮತ್ತು ಇದೇ ಪಕ್ಷದ ಇನ್ನೊಬ್ಬ ನಾಯಕ ಡಿ.ಎಚ್.ಶಂಕರಮೂರ್ತಿ ದೇವೇಗೌಡರ ಕುರಿತು ಆಡಿದ ಮಾತಿದು.
ಆಗ್ನೇಯ ಪದವೀಧರ ಕ್ಷೇತ್ರದ ಚುನಾಮಣೆ ಪ್ರಚಾರಕ್ಕೆಂದು ಇಲ್ಲಿಗೆ ಬಂದಿದ್ದ ಸೇಡಂ ಮತ್ತು ಶಂಕರಮೂರ್ತಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡ ರಾಜಕಾರಣಿಗಳು ಹಲವರು.
ನಮ್ಮ ದೇಶದಲ್ಲಿ ನೋಡಿ- ರಾಬ್ಡೀದೇವಿ, ಜಯಲಲಿತಾ ಅಂಥವರು ಮುಖ್ಯಮಂತ್ರಿಗಳಾಗುತ್ತಾರೆ. ದೇವೇಗೌಡರ ಅಂಥವರು ಪ್ರಧಾನಿ ಮಂತ್ರಿಯಾಗುತ್ತಾರೆ. ಜಾತ್ಯತೀತ ಜನತಾ ದಳದ ಏಕೈಕ ಲೋಕಸಭಾ ಸದಸ್ಯರಾದ ಅವರು ರಾಷ್ಟ್ರೀಯ ನಾಯಕರೇ ಅಲ್ಲ. ಅವರು ಪ್ರಧಾನಿಯಾದದ್ದೂ ಒಂದು ಆಕಸ್ಮಿಕ ಅಷ್ಟೆ ಎಂದು ಕಟಕಿಯಾಡಿದರು.
ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಗಾದಿಯಲ್ಲಿ ಕೂರಿಸಿ ಮುಸ್ಲಿಂ ಜನಾಂಗವನ್ನು ಓಲೈಸುವುದು ಸಾಧ್ಯವಿಲ್ಲ ಎಂಬ ದೇವೇಗೌಡರ ಟೀಕೆಯ ಮಾತಿಗೆ ಪ್ರತಿಕ್ರಿಯಿಸಿದ ಸೇಡಂ, ನಮ್ಮ ಪಕ್ಷ ಈ ರೀತಿಯ ಕ್ಷುಲ್ಲಕ ಯೋಚನೆಗಳನ್ನು ಮಾಡುವುದಿಲ್ಲ. ಕಲಾಂ ನಿರ್ವಿವಾದಿತರು ಹಾಗೂ ಭವಿಷ್ಯದ ಜನಾಂಗಕ್ಕೆ ಮಾದರಿಯಾಗಬಲ್ಲವರು. ಅವರ ಅರ್ಹತೆ ಮತ್ತು ಯೋಗ್ಯತೆಯ ಕಾರಣಕ್ಕಷ್ಟೇ ಅವರು ರಾಷ್ಟ್ರಪತಿ ಸ್ಥಾನಕ್ಕೆ ನಮ್ಮ ಅಭ್ಯರ್ಥಿಯಾಗಿದ್ದಾರೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...