‘ಹನಿಹನಿ ಹಳ್ಳ’ ಮಾಡಲು 2250 ಕೋಟಿ ರು. ಬೃಹತ್ ಯೋಜನೆ
ಬೆಂಗಳೂರು : ಅಂತರ್ಜಲ ವೃದ್ಧಿ, ಜಲ ಸಂಗ್ರಹಣೆ ಮತ್ತು ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದ ‘ಜಲರಕ್ಷಣಾ’ ಎಂಬ 2,250 ಕೋಟಿ ರುಪಾಯಿಯ ಬೃಹತ್ ಯೋಜನೆಗೆ ಸರ್ಕಾರ ಮುಂದಿನ ತಿಂಗಳು ಚಾಲನೆ ನೀಡಲಿದೆ.
ಮಂಗಳವಾರ ಸುದ್ದಿಗಾರರೊಡನೆ ಮಾತಾಡುತ್ತಿದ್ದ ಪಂಚಾಯತ್ ರಾಜ್ ಸಚಿವ ಎಂ.ವೈ.ಘೋರ್ಪಡೆ ಈ ವಿಷಯ ತಿಳಿಸಿದರು. ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ ನಂತರ ಮಾತಾಡಿದ ಘೋರ್ಪಡೆ, ಈ ಬೃಹತ್ ಯೋಜನೆಯ ಹಣದಲ್ಲಿ ‘ಜಲ ನಿರ್ಮಲ’ ಯೋಜನೆಗೆ 1000 ಕೋಟಿ ರುಪಾಯಿ, ‘ಜಲ ಸಂವರ್ಧನೆ’ಗೆ 650 ಕೋಟಿ ರುಪಾಯಿ ಮತ್ತು ಜಲವಸತಿ ನಿರ್ವಹಣೆಗೆ 600 ಕೋಟಿ ರುಪಾಯಿ ಮೀಸಲಿಡಲಾಗಿದೆ ಎಂದರು.
ಮುಂದಿನ ತಿಂಗಳು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈ ಬೃಹತ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ವಿಶ್ವ ಬ್ಯಾಂಕ್ ಈ ಎಲ್ಲಾ ಕಾರ್ಯಕ್ರಮಗಳಿಗೆ ಧನ ಸಹಾಯ ಮಾಡುತ್ತಿದೆ. ಜಲ ನಿರ್ವಹಣೆ ವಿಷಯದಲ್ಲಿ ಈಗ ಸರ್ಕಾರ ಗಂಭೀರವಾದ ಹೆಜ್ಜೆಗಳನ್ನಿಡುತ್ತಿದ್ದು, ಗ್ರಾಮ ಪಂಚಾಯಿತಿಗಳನ್ನು ಕೇಂದ್ರಗಳನ್ನಾಗಿಸಿಕೊಂಡು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಜಲ ಸಮಸ್ಯೆ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಮ್ಮಟಗಳು ಮತ್ತು ಬೀದಿ ನಾಟಕಗಳನ್ನು ಆಯೋಜಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಿದರು.
15 ಲಕ್ಷ ಟನ್ ಆಹಾರದ ಬೇಡಿಕೆ : ಈ ಬೃಹತ್ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯಕ್ಕೆ 15 ಲಕ್ಷ ಟನ್ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡುವಂತೆ ಹಾಗೂ ಸಂಪೂರ್ಣ ಗ್ರಾಮ ರೋಜ್ಗಾರ್ ಯೋಜನೆಯಡಿಯಲ್ಲಿ ರಾಜ್ಯದ ಯುವಕರಿಗೆ ಉದ್ಯೋಗ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಸುಮಾರು 1.6 ಕೋಟಿ ಮಂದಿಗೆ ಈ ಯಾಜನೆಯಲ್ಲಿ ದುಡಿಯಲು 6 ತಿಂಗಳ ಕೆಲಸ ದೊರೆಯುವುದು ಗ್ಯಾರಂಟಿ ಎಂದು ಘೋರ್ಪಡೆ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...