ಹಂಪಿ ವೈಭವದ ಇತಿಹಾಸಕ್ಕೆ ಮೂರು ಹೊಸ ಕವಲು ಸೇರ್ಪಡೆ
ಹೊಸಪೇಟೆ: ಭಾರತೀಯ ಪುರಾತತ್ವ ಸಮೀಕ್ಷೆಯು(ಎಎಸ್ಐ), ಹಂಪೆಯಲ್ಲಿ ಮೂರು ಆಸಕ್ತಿದಾಯಕ ಸಂಶೋಧನೆಗಳನ್ನು ನಡೆಸಿದೆ. ವಿಜಯ ವಿಠ್ಠಲದೇವಸ್ಥಾನದ ಮುಂದಿರುವ ವಿಜಯ ವಿಠ್ಠಲ ಬಜಾರ್ ನಲ್ಲಿ ಹಾಸು ಕಲ್ಲು ಹಾಕಿರುವ ರಸ್ತೆ, ಶಿವ ದೇವಸ್ಥಾನದ ಮುಂದೆ ವಾಣಿಜ್ಯ ಸಂಕೀರ್ಣ, ಹಾಗೂ ಸಾಸುವೆ ಕಾಳು ಗಣಪತಿ ದೇವಸ್ಥಾನದ ಮುಂದೆ ಕಲ್ಲಿನ ಶಾಸನ ಪತ್ತೆಯಾಗಿರುವುದಾಗಿ ಎಎಸ್ಐ ಮೂಲಗಳು ತಿಳಿಸಿವೆ.
40 ಮೀಟರ್ಗಳಷ್ಟು ಅಗಲದ ಕಲ್ಲಿನ ರಸ್ತೆ ಯ ಇಕ್ಕೆಲಗಳಲ್ಲಿಯೂ ಮಂಟಪಗಳಿದ್ದದ್ದು ತಿಳಿದುಬಂದಿದೆ. ಈ ದಾರಿಯು ತಳವಾರ ಘಟ್ಟದಿಂದ ಆರಂಭವಾಗಿ ವಿಜಯ ವಿಠ್ಠಲ ದೇವಸ್ಥಾನದ ಮೂಲಕ ಹಾದು ವಿರೂಪಾಕ್ಷ ದೇವಸ್ಥಾನದತ್ತ ತೆರಳಿರಬಹುದು ಎಂದು ಅಂದಾಜು ಮಾಡಲಾಗಿದೆ.
ವಿಜಯ ವಿಠ್ಠಲ ದೇವಸ್ಥಾನದ ಪೂರ್ವ ದ್ವಾರದ ಬಳಿ ಎಡ ಬದಿಗೆ ಶಿವ ದೇವಸ್ಥಾನ ಇರುವುದು ತಿಳಿದುಬಂದಿದೆ. ಇನ್ನೊಂದು ಸಂಶೋಧನೆಯಲ್ಲಿ ಅಲ್ಲೇ ಪಕ್ಕದಲ್ಲಿ ವಿಷ್ಣು ದೇವಸ್ಥಾನ ಹಾಗೂ ಬೃಂದಾವನಗಳೂ ಇದ್ದಿರಬಹುದು ಎಂದು ತಿಳಿದು ಬಂದಿದೆ. ಇಂತಹುದೇ ಇನ್ನಷ್ಟು ಅವಶೇಷಗಳು ವಿಜಯ ವಿಠ್ಠಲ ದೇವಸ್ಥಾನದ ಮುಂದೆ ಇದ್ದಿರಬಹುದು ಎಂದು ಶಂಕಿಸಲಾಗಿದೆ.
1506ಕ್ಕೂ ಹಿಂದಿನ ಕಾಲದ ಶಾಸನ ಬರೆಸಿದ್ದ ಕಲ್ಲೊಂದು ಸಾಸುವೆ ಕಾಳು ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಪತ್ತೆಯಾಗಿದ್ದು, ಕನ್ನಡದಲ್ಲಿರುವ ಈ ಶಾಸನವನ್ನು ತೆಲುಗು ಲಿಪಿಯಲ್ಲಿ ಕೆತ್ತಲಾಗಿದೆ. ಶಾಸನದ ಪ್ರಕಾರ ಆ ಪ್ರದೇಶವನ್ನು ಹೇಮಕೂಟ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಪೆನುಕೊಂಡ ಮತ್ತು ಹಂಪಿಯ ನಡುವಿನ ಸಂಬಂಧದ ಬಗ್ಗೆಯೂ ಈ ಶಾಸನ ಮಾಹಿತಿ ಒದಗಿಸಬಹುದು ಎಂದು ಎಎಸ್ಐ ಅಧಿಕಾರಿಗಳು ನಿರೀಕ್ಷಿಸಿದ್ದಾರೆ.
ಪೆನುಕೊಂಡದ ನರಸಿಂಹ ನಾಯಕ್ ಎಂಬಾತ ಗಣಪತಿ ದೇವಸ್ಥಾನವನ್ನು ಕಟ್ಟಿಸಿದ್ದು, ನಂತರದಲ್ಲಿ ಈ ದೇವಸ್ಥಾನ ಸಾಸುವೆಕಾಳು ಗಣಪತಿ ದೇವಸ್ಥಾನ ಎಂದು ಕರೆಯಲ್ಪಟ್ಟಿತು ಎಂದು ಶಾಸನ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...