ದೆಹಲಿ ವಿ.ವಿ.ಗೆ ಟಾಟಾ ಹೇಳುತ್ತಿರುವ ವಿದೇಶಿ ವಿದ್ಯಾರ್ಥಿಗಳು !
ನವದೆಹಲಿ : ಪಾಕಿಸ್ತಾನ- ಭಾರತ ನಡುವಿನ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿರುವಂತೆಯೇ ಭಾರತದಲ್ಲಿ ಶಿಕ್ಷಣ ಪಡೆಯಲು ಬರುತ್ತಿರುವ ವಿದೇಶೀ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖ ಕಂಡು ಬಂದಿದೆ.
ನಿರ್ದಿಷ್ಟ ಕೋರ್ಸನ್ನು ಆಯ್ದುಕೊಂಡ ಕೆಲ ಮಂದಿ ವಿದೇಶಿ ವಿದ್ಯಾರ್ಥಿಗಳು ಕೋರ್ಸನ್ನು ಅರ್ಧದಲ್ಲಿಯೇ ಬಿಟ್ಟು ತಮ್ಮ ತಾಯ್ನಾಡಿಗೆ ಹೋಗುತ್ತಾರೆ. ದೆಹಲಿ ವಿಶ್ವ ವಿದ್ಯಾಲಯದಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ.
ದೆಹಲಿ ವಿವಿಯ ಫ್ರಮಹಾನ್ ನರುಪಾನ್ ಎಂಬ ಬೌದ್ಧ ಧರ್ಮ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿ ತನ್ನ ಕೋರ್ಸು ಮುಗಿಯುವ ಮುಂಚೆಯೇ ವಾಪಾಸಾಗಲು ನಿರ್ಧರಿಸಿದ್ದಾನೆ. ನಂಗೆ ಪಾಕಿಸ್ತಾನ, ಭಾರತದ ಮೇಲೆ ಬಾಂಬ್ ಹಾಕಬಹುದು ಎಂಬ ಹೆದರಿಕೆ. ದೆಹಲಿ ಭಾರತದ ರಾಜಧಾನಿಯಾದ್ದರಿಂದ ಪಾಕಿಗಳು ದೆಹಲಿಗೇ ಬಾಂಬ್ ಹಾಕಬಹುದು. ಆದ್ದರಿಂದ ನಾನು ಮನೆಗೆ ಹೋಗುತ್ತಿದ್ದೇನೆ ಎನ್ನುತ್ತಾನೆ.
ಸುಮಾರು 55 ರಾಷ್ಟ್ರಗಳಿಂದ ಸುಮಾರು 1,200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಈ ವರ್ಷ ದೆಹಲಿ ವಿಶ್ವವಿದ್ಯಾಲಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಧ್ಯಯನಕ್ಕೆ ಅವಕಾಶ ಕೋರಿದ್ದರು. ಆದರೆ ಭಾರತ- ಪಾಕ್ ನಡುವೆ ಪರಿಸ್ಥಿತಿ ಬಿಗುವಾದಷ್ಟೂ ಭಾರತದಲ್ಲಿ ಓದುವ ಯೋಚನೆಯನ್ನು ಕೈಬಿಡುತ್ತಿದ್ದಾರೆ.
ಸುಮಾರು 550 ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ತರಗತಿಗಳು ಆರಂಭವಾಗುವ ಹೊತ್ತಿಗೆ ಕೇವಲ 100 ಮಂದಿ ವಿದ್ಯಾರ್ಥಿಗಳು ಮಾತ್ರ ಅಧ್ಯಯನವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಿಂದ ಬಂದಿರುವ 30 ಮಂದಿ ವಿದ್ಯಾರ್ಥಿಗಳು ಈ ವರ್ಷ ತಮ್ಮ ಅಧ್ಯಯನವನ್ನು ಮುಂದುವರೆಸುತ್ತಿಲ್ಲ ಎಂದು ದೆಹಲಿ ವಿಶ್ವ ವಿದ್ಯಾಲಯದ ವಿದೇಶೀ ವಿದ್ಯಾರ್ಥಿಗಳ ಸಲಹೆಗಾರ ಎ. ಎಸ್. ನರಗ್ ಹೇಳುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...