ಕಾರಂತ ಅಧ್ಯಯನ ಪೀಠಕ್ಕೆ 58ಲಕ್ಷ ರೂ.ಬಾಕಿ ಉಳಿಸಿಕೊಂಡ ಸರಕಾರ
ಕೋಣಾಜೆ: ಮಂಗಳೂರು ವಿಶ್ವ ವಿದ್ಯಾಲಯದ ಕಾರಂತ ಅಧ್ಯಯನ ಪೀಠಕ್ಕೆ ರಾಜ್ಯ ಸರಕಾರ ನೀಡಬೇಕಿದ್ದ ಅನುದಾನದಲ್ಲಿ ಇನ್ನೂ 58 ಲಕ್ಷ ರೂಪಾಯಿಗಳನ್ನು ನೀಡಿಲ್ಲ ಎಂದು ವಿವಿಯ ಕುಲಪತಿ ಪ್ರೊ. ಬಿ. ಹನುಮಯ್ಯ ದೂರಿದ್ದಾರೆ.
ಅವರು ಮಂಗಳವಾರ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಕಾರಂತ ಅಧ್ಯಯನ ಪೀಠಕ್ಕೆ ಬರಬೇಕಿದ್ದ ಹಣದಲ್ಲಿ ಇನ್ನೂ 58 ಲಕ್ಷ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿರುವ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.
ಈ ಬಗ್ಗೆ ಸರಕಾರಕ್ಕೆ ಪತ್ರಬರೆದು ವಿವರಿಸಲಾಗಿದೆ. ಆದರೂ ಸರಕಾರ ಯಾವುದೇ ಪ್ರತಿಕ್ರಿಯೆ ತೋರಿಸುತ್ತಿಲ್ಲ. ಕರಾರಿನ ಪ್ರಕಾರ ಪ್ರತಿ ವರ್ಷ ಕಾರಂತ ಅಧ್ಯಯನ ಪೀಠಕ್ಕಾಗಿ ಸರಕಾರ 7 ಲಕ್ಷ ರೂಪಾಯಿ ನೀಡಬೇಕು. ಆದರೆ ಕಳೆದ ಸತತ ಏಳು ವರ್ಷಗಳಿಂದ ಸರಕಾರ ಒಟ್ಟು ನೀಡಿದ ಮೊತ್ತ ಬರೇ 5 ಲಕ್ಷ. ಉಳಿದ ಹಣವನ್ನು ಸಂದಾಯ ಮಾಡುವಂತೆ ಸರಕಾರಕ್ಕೆ ಮತ್ತೊಮ್ಮೆ ಆಗ್ರಹಿಸಿ ಪತ್ರ ಬರೆಯಲಾಗಿದೆ ಎಂದು ಹನುಮಯ್ಯ ಹೇಳಿದರು.
ಇದೇ ಸಂದರ್ಭದಲ್ಲಿ , ಮಂಗಳೂರು ಮುಕ್ತ ವಿಶ್ವ ವಿದ್ಯಾಲಯ ಸ್ಥಾಪಿಸುವ ಯೋಜನೆ ವಿವಿ ಆಡಳಿತ ಮಂಡಳಿಯ ಮುಂದಿದೆ. ಸರಕಾರದಿಂದ ಅನುಮತಿ ದೊರೆತ ತಕ್ಷಣವೇ ಮುಕ್ತ ವಿಶ್ವವಿದ್ಯಾಲಯವನ್ನು ಆರಂಭಿಸಲಾಗುವುದು ಎಂದು ಹನುಮಯ್ಯ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...