ಜೂನ್ ಅಂತ್ಯಕ್ಕೆ ಬೆಂಗಳೂರು-ಮೈಸೂರು ಕಾರಿಡಾರ್ಗೆ ಚಾಲನೆ
ಬೆಂಗಳೂರು :ತೀವ್ರ ವಿರೋಧದ ನಡುವೆ ಕಳೆದ 7 ವರ್ಷಗಳಿಂದ ಕೆಸರು ಗಲ್ಲು ಕಾಣದೆ, ಪದೇ ಪದೇ ಮುಂದಕ್ಕೆ ಹೋಗುತ್ತಾ ಬಂದಿರುವ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆಗೆ ಜೂನ್ ತಿಂಗಳಾಂತ್ಯದಲ್ಲಿ ಚಾಲನೆ ದೊರೆಯಲಿದೆ.
ಪುಣೆ ಮೂಲದ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೆೃಸಸ್ (ಎನ್ಐಎಸ್ಇ) ನ ಅಧ್ಯಕ್ಷ ಅಶೋಕ್ ಕಿನಿ ಬುಧವಾರ ಸುದ್ದಿಗಾರರಿಗೆ ಅನೌಪಚಾರಿಕ ಮಾತುಕತೆಯಲ್ಲಿ ಈ ವಿಷಯ ಹೇಳಿದ್ದಾರೆ. ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳಿಂದ ಸಿಗಬೇಕಾದ ಎಲ್ಲಾ ಅನುಮತಿಗಳೂ ಈಗಾಗಲೇ ದೊರೆತಿವೆ. ಹೀಗಾಗಿ ಈ ತಿಂಗಳ ಕೊನೇ ವಾರದಲ್ಲಿ ಬೆಂಗಳೂರು- ಬಿಡದಿ ನಡುವಿನ 61 ಕಿ.ಮೀ. ವ್ಯಾಪ್ತಿಯಲ್ಲಿ ಮೊದಲ ಹಂತದ ಕೆಲಸ ಶುರುವಾಗುತ್ತದೆ. ಮೊದಲ ಹಂತದ ಕಾಮಗಾರಿಗೆ 1000 ಕೋಟಿ ರುಪಾಯಿ ಅಂದಾಜು ವೆಚ್ಚವಾಗಲಿದೆ ಎಂದರು.
ಬೆಂಗಳೂರು- ಮೈಸೂರು ನಡುವಿನ 131 ಕಿ.ಮೀ. ಅಂತರದ ಈ ಇಡೀ ಯೋಜನೆ ಇನ್ನು ಐದು ವರ್ಷಗಳಲ್ಲಿ ಪೂರ್ಣವಾಗಲಿದೆ. ಯೋಜನೆಯ ಒಟ್ಟಾರೆ ಅಂದಾಜು ವೆಚ್ಚ 2000 ಕೋಟಿ ರುಪಾಯಿ. ಯೋಜನೆ ಪೂರ್ಣವಾದ ನಂತರ, ಕಾರಿಡಾರ್ ರಸ್ತೆಯಲ್ಲಿ ಬೆಂಗಳೂರು-ಮೈಸೂರು ನಡುವೆ ಕೇವಲ 70 ನಿಮಿಷಗಳಲ್ಲಿ ಪ್ರಯಾಣ ಸಾಧ್ಯವಾಗಲಿದೆ ಎಂದು ಅಶೋಕ್ಕಿನಿ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...