ದುಡ್ಡೇ ದೊಡ್ಡಪ್ಪ -4: ಸೈಟು ಸೈ ಚಿನ್ನಕ್ಕೆ ಜೈ
ಹೂಚಿಕೆಗೆ ಮುನ್ನ - ನಿಮ್ಮಲ್ಲಿ ಎಷ್ಟು ಹಣವಿದೆ, ನಿಮ್ಮ ಅವಶ್ಯಕತೆಗಳೇನು, ಎಷ್ಟು ಹಣ ಹೋದರೆ ಪರವಾಗಿಲ್ಲ (ರಿಸ್ಕ್ ಫ್ಯಾಕ್ಟರ್ಸ್) ಎನ್ನುವ ಅಂಶಗಳನ್ನು ಗುರುತಿಸಿಕೊಳ್ಳಿ. ಬಾಂಡ್ ಸೇವೆ, ಸಾಲಪತ್ರಗಳಲ್ಲಿ ಹೂಡಿಕೆ ಒಳ್ಳೆಯ ಮಾರ್ಗ, ಲೆಕ್ಕಪತ್ರದ ಗೋಜೇ ಬೇಡ ಎಂದರೆ ಕಿಸಾನ್ ವಿಕಾಸ ಪತ್ರ ಕೊಳ್ಳಿರಿ ಎನ್ನುವುದು ಎಲ್ಲರಿಗೂ ಸಲ್ಲುವ ಸಲಹೆ:
ಉಳಿತಾಯದ ಹಣವನ್ನು ಎಲ್ಲಿಡಲಿ ಎನ್ನುವ ಪ್ರಶ್ನೆಯ ಗರ್ಭದಲ್ಲೇ ಭವಿಷ್ಯ ಕುರಿತಂತೆ ಆಶಾವಾದ ಇದೆ. ಮನೆಯಲ್ಲಿ ಅಲ್ಲದೇ ಬೇರೆ ಎಲ್ಲಿಟ್ಟರೂ ಹಣ ವೃದ್ಧಿ ಖಚಿತ. ಹಾಗಿದ್ರೆ ಕೈತುಂಬಾ ಹಣ ಇರುವವರು ತುಂಬಾ ಲಾಭಗಳಿಸಲು ಎಲ್ಲಿಡಬೇಕು ಹಣವನ್ನು?
ಎರಡು ರಾಜಮಾರ್ಗಗಳಿವೆ ಸ್ವಾಮಿ- ಮೊದಲನೆಯದು ಸ್ಥಿರಾಸ್ತಿ ಅಥವಾ ರಿಯಲ್ ಎಸ್ಟೇಟು. ಸುಮಾರು ಇಪ್ಪತ್ತೆೈದು ವರ್ಷಗಳ ಹಿಂದೆ 5000 ಚಿಲ್ರೆ ರೂಪಾಯಿಗೆ ಕೊಂಡುಕೊಂಡ ಸೈಟು ಈಗ ಕಳ್ಳನ ಕೈಗೆ ಕೊಟ್ಟರೂ 25 ಲಕ್ಷ ಸಿಕ್ಕೀತು.
ಅದು ಬಿಡಿಎ ಸೈಟಿನ ಮಾತು. ಆದರೆ ರೆವಿನ್ಯೂ ಸೈಟುಗಳನ್ನು ಕೊಂಡವರ ಗತಿ? ಅನೇಕರು ಈಗಲೂ ರೆವಿನ್ಯೂ ಸೈಟು ಮಾಲಿಕರಾಗಿಯೇ ಇದ್ದಾರೆ. ಸೈಟಿನ ಮೌಲ್ಯ ಜಾಸ್ತಿ ಇರಬಹುದು, ಆದರೆ ಕೊಳ್ಳಲು ನಮಗೆ ಬೇಕಾದಾಗ ಸರಿಯಾದ ಕಾರಣಗಳು ಸಿಗಬೇಕಲ್ಲ.
ನಿವೇಶನ ಬಿಟ್ಟು ಮನೆಕೊಂಡರೆ ಮೌಲ್ಯವೂ ಸಿಗುತ್ತೆ. ಬಾಡಿಗೆಯೂ ಬರುತ್ತೆ ಎನ್ನುವ ಮಾತು ಮೇಲ್ನೋಟಕ್ಕೆ ಸರಿಯಾದರೂ ವಾಸ್ತವಿಕತೆಯ ಎದುರಿನಲ್ಲಿ ಅದು ಲಾಗಾ ಹಾಕುತ್ತದೆ. ಮನೆ ಕೊಳ್ಳುವುದೆಂದರೆ ದೊಡ್ಡ ರೀತಿಯಲ್ಲೇ ಬಂಡವಾಳ ಹೂಡಬೇಕು. ಅದಕ್ಕೆ ಕೆಲವು ಬಾಡಿಗೆ ರೂಪದಲ್ಲಿ ಸಿಗುವ ಪ್ರತಿಸಾಲ ತೀರ ಕಡಿಮೆ. ನಾವೇ ಮನೆಯನ್ನು ಮಾರಲಿಕ್ಕೆ ಹೋದಾಗ ಕೊಳ್ಳುವವರು ಸುಲಭವಾಗಿ ಸಿಗಬೇಕಲ್ಲ. ಬಂಡವಾಳ ಹೂಡುವುದಾದರೆ ಮನೆಗಿಂತ ಖಾಲಿ ನಿವೇಶನವನ್ನು ಕೊಳ್ಳುವುದೇ ಬೆಸ್ಟು.
ಸೈಟು ವ್ಯವಹಾರ ಬಿಟ್ಟರೆ ಚಿನ್ನ ಲಾಗಾಯ್ತಿನಿಂದಲೂ ಬಂಡವಾಳ ಹೂಡುವವರನ್ನು ಆಕರ್ಷಿಸಿದೆ. ಕೆಲವೊಮ್ಮೆ ಕೆಲವು ವಾರಗಳ ಕಾಲ ಬೆಲೆ ಕುಸಿದ್ದರೂ ಚಿನ್ನ ಎಷ್ಟಿದ್ದರೂ ಚಿನ್ನವೇ. ಗಿರಾಕಿಗೆ ಯಾವತ್ತಿಗೂ ಕೊರತೆ ಇಲ್ಲ. ಒತ್ತೆ ಇಟ್ಟರೆ ಯಾವ ಮಾರವಾಡಿಯೂ ಸಾಲ ಇಲ್ಲವೆನ್ನುವುದಿಲ್ಲ . ಚಿನ್ನದ ಮೇಲೆ ದುಡ್ಡು ಹೂಡುವುದು ದೀರ್ಘಾವಧಿಯಲ್ಲಿ ನಿಶ್ಚಿತವಾಗಿಯೂ ಲಾಭದಾಯಕ.
ಚೀಟಿ ಸವಾಸ ಬೇಡಪ್ಪಾ ಬೇಡ
ಕೆಲವು ಚಿಟ್ಫಂಡ್ಗಳ ಜಾಹೀರಾತುಗಳನ್ನು ಗಮನಿಸಿದ್ದೀರಾ? ಭಾರೀ ಲಾಭದಾಯಕ ಯೋಜನೆ ಅಂಥ ಜಾಹಿರಾತು ಹೇಳುತ್ತದೆ. ಆದರೆ ಕೆಲವು ತಿಂಗಳ ನಂತರ ಆ ಫಂಡ್ ಮಾಲಿಕರನ್ನು ಎಲ್ಲಿ ಹುಡುಕುವುದು? ನಿಮ್ಮಲ್ಲಿ ಎಷ್ಟಾದರೂ ಕಾಸಿರಲಿ, ನಷ್ಟದ ಚಿಂತೆಯೇ ಇಲ್ಲ ಎಂದಿಟ್ಟುಕೊಂಡರೂ, ಈ ಚೀಟಿ ಕಂಪನಿ ಸಹವಾಸ ಬೇಡಪ್ಪಾ ಬೇಡ.
ನಮ್ಮಲ್ಲಿ ಈಗ ಹಣ ಇಡಿ ಎನ್ನುವ ಪ್ಲಾಂಟೇಷನ್ ಕಂಪನಿಯ ಜಾಹೀರಾತುಗಳನ್ನು ಓದುವುದಕ್ಕೇ ಹೋಗಬೇಡಿ. ಸುಮ್ಮನೇ ಟೈಂ ವೇಸ್ಟು. ಬಂಪರ್ ಬಹುಮಾನದ ಲಾಟರಿ ಯೋಜನೆಗಳಿಂದಲೂ ದೂರವಿರಬೇಕು. ಅದೃಷ್ಟ ಪರೀಕ್ಷೆ ಮಾಡಲೇಬೇಕು ಅನ್ನಿಸಿದರೆ ಹತ್ತಿಪ್ಪತ್ತು ರೂಪಾಯಿ ಕೊಟ್ಟು ಲಾಟರಿ ತಗೊಳ್ಳಿ. ಸಾವಿರಾರು ರುಪಾಯಿಗಳ ಲೆಕ್ಕಕ್ಕೆ ಬಿದ್ದಿರೋ ಕೈ ಸುಟ್ಟುಕೊಳ್ಳುತ್ತೀರಿ.
ಇನ್ನು ದಿನದ, ವಾರದ ತಿಂಗಳ ಸಾಲ-ಬಡ್ಡಿ ಲೆಕ್ಕದ ವ್ಯವಹಾರದ ಕಡೆ ಮುಖ ಹಾಕುವ ಸಾಹಸಕ್ಕೆ ಹೋಗಬೇಡಿ. ಕಾನೂನಿಗದು ವಿರುದ್ಧ. ಅನೇಕರು ಬೆಳಿಗ್ಗೆ ತರಕಾರಿ ವ್ಯಾಪಾರಿಗಳಿಗೆ 100 ರೂಪಾಯಿ ಸಾಲ ಕೊಟ್ಟು ಸಂಜೆ 120 ರೂಪಾಯಿ ಪಡೀತಾರೆ. ಇದೆಲ್ಲ ನಡೆದಷ್ಟು ದಿನ ನಾಣ್ಯ ಅನ್ನುವಂಥದ್ದು . ಮರ್ಯಾದಸ್ಥರಿಗೆ ಒಗ್ಗುವಂಥದ್ದಲ್ಲ. ವಕ್ರಮಾರ್ಗ ಯಾವತ್ತಿಗೂ ಬೇಡ.
ಭಾಗ 1 : ಮುಖಪುಟ / ಇವತ್ತು... ಈ ಹೊತ್ತು...