ಬಾಹ್ಯಾಕಾಶ ತಂತ್ರವನ್ನು ಉದ್ದಿಮೆಗೆ ಬೆಸೆಯಲು ಇಸ್ರೋದ ಪ್ರಸ್ತಾವನೆ
ಬೆಂಗಳೂರು : ಭಾರತೀಯ ಕೈಗಾರಿಕೆಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ ಬಾಹ್ಯಾಕಾಶ ಹಾರ್ಡ್ವೇರ್ ಪಡೆಯಲು ಅನುವಾಗುವಂತಹ ದೀರ್ಘಾವಧಿ ಒಡಂಬಡಿಕೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಿದೆ. ಉದ್ದಿಮೆಯ ಅಂತರರಾಷ್ಟ್ರೀಯ ಮಟ್ಟದ ಏಳಿಗೆ ದೃಷ್ಟಿಯಿಂದ ಇದು ಮಹತ್ವದ ಹಾಗೂ ನವೀನ ದೃಷ್ಟಿಕೋನವಾಗಿದೆ.
ಇಸ್ರೋ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಬುಧವಾರ ನಡೆದ ಬಾಹ್ಯಾಕಾಶ ಉದ್ದಿಮೆ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮುಂದಿಟ್ಟರು. ಈ ಪ್ರಸ್ತಾವನೆಯನ್ನು ಯೋಜನೆಯಾಗಿಸುವ ನಿಟ್ಟಿನಲ್ಲಿ ಅಗತ್ಯ ನೀತಿ ಸಂಹಿತೆಗಳಿಗೆ ಚೌಕಟ್ಟು ಕೊಡುವ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದರು.
ಮುಂದಿನ 5 ವರ್ಷಗಳಲ್ಲಿ ಬಾಹ್ಯಾಕಾಶದ ಹೂಡಿಕೆ ಈಗಿನದ್ದಕ್ಕಿಂತ ದುಪ್ಪಟ್ಟಾಗಲಿದೆ. ಆದರೆ ಸಂಸ್ಥೆಯ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವಿಲ್ಲ. ಇಸ್ರೋದ ಮುಂದಿನ ಹೆಜ್ಜೆಗಳಿಗೆ ಉದ್ದಿಮೆಗಳ ನೆರವನ್ನು ಪಡೆಯಲಾಗುವುದು. ಸಂಸ್ಥೆಯ ಹತ್ತನೇ ಯೋಜನಾವಧಿಯಲ್ಲಿ ಈ ಹಿಂದಿನ ಯೋಜನಾವಧಿಗಿಂತ ದುಪ್ಪಟ್ಟು ಕಾರ್ಯಾಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಯೋಜನಾವಧಿಯಲ್ಲಿ 16 ಕಾರ್ಯಾಚರಣೆಗಳನ್ನು ಯೋಜಿಸಲಾಗಿತ್ತು. ಭೌಗೋಳಿಕ ಮಾಹಿತಿ ವ್ಯವಸ್ಥೆಗಳ (ಜಿಐಎಸ್) ಮಾರುಕಟ್ಟೆ ಭಾರತದಲ್ಲಿ 1000 ಕೋಟಿ ರುಪಾಯಿಗಳಷ್ಟಿದೆ ಎಂದು ಅಂದಾಜು ಮಾಡಲಾಗಿದೆ. ರಾಷ್ಟ್ರೀಯ ಬಾಹ್ಯಾಕಾಶ ದತ್ತಾಂಶ ಮೂಲಭೂತ ಸೌಲಭ್ಯ (ಎನ್ಎಸ್ಡಿಐ) ದಿಂದ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸಿ, ಕೈಗಾರಿಕೆಗಳೂ ಅದರಲ್ಲಿ ತೊಡಗುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಕಸ್ತೂರಿ ರಂಗನ್ ಹೇಳಿದರು.
ಇದರಿಂದ ಯಾರ್ಯಾರಿಗೆ ಉಪಯೋಗ : ಈ ಮಹತ್ವದ ಬೆಳವಣಿಗೆ ಜಾರಿಗೆ ಬಂದಲ್ಲಿ ಅಭಿವೃದ್ಧಿ ಕಾಮಗಾರಿಗಳು, ಮೂಲಭೂತಸೌಲಭ್ಯಗಳ ಹೂಡಿಕೆದಾರರು, ವ್ಯಾಪಾರಸ್ಥರು, ಉದ್ದಿಮೆದಾರರು, ಸಂಶೋಧನಾ ಸಂಸ್ಥೆಗಳಿಗಷ್ಟೇ ಅಲ್ಲದೆ ಸಾಮಾನ್ಯ ನಾಗರಿಕರಿಗೂ ಸಾಕಷ್ಟು ಉಪಯೋಗವಾಗಲಿದೆ. ಬಾಹ್ಯಾಕಾಶದ ನೆರವಿನಿಂದ ಭಾರತೀಯ ಕೈಗಾರಿಕೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಹಿಗ್ಗಲಿಸಿಕೊಳ್ಳುವುದು ಸಾಧ್ಯವಾಗಲಿದೆ. ಕೃಷಿಕರ ನೆರವಿಗೆ ಖರೆ ಹವಾಮಾನ ವರದಿ ಕೊಡುವುದಲ್ಲದೆ ಪ್ರವಾಸೋದ್ಯಮ ಮತ್ತು ಸಾರಿಗೆ ಕ್ಷೇತ್ರಗಳ ಪ್ರಗತಿಯೂ ಇದರಿಂದ ಆಗಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಾಲ್ಚಂದ್ನಗರ್ ಕೈಗಾರಿಕಾ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಸಿಇಓ ಎ.ಯು.ರಿಝ್ಸಿಂಘಾನಿ, ಕಸ್ತೂರಿ ರಂಗನ್ ಪ್ರಸ್ತಾವನೆಯನ್ನು ಸಮರ್ಥಿಸಿದರು. ಇಂಥಾ ಒಡಂಬಡಿಕೆಗಳು ಸರ್ವತೋಮುಖ ಪ್ರಗತಿಯ ಹಾದಿಯಲ್ಲಿ ಭರವಸೆ ಮೂಡಿಸುವಂಥವು. ಈ ಯೋಜನೆಯನ್ನು ಕಾಲಮಿತಿ ಹಾಕಿಕೊಂಡು, ಅನುಷ್ಠಾನಕ್ಕೆ ತರುವುದು ಬಹು ಮುಖ್ಯ ಎಂದು ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...