ಭಾರೀ ಮಳೆಗೆ ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಗೋಡೆ ಕುಸಿತ
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ದತ್ತಾತ್ರೇಯ ಬಾಬಾ ಬುಡನ್ ದರ್ಗಾದ ಗೋಡೆ ಕುಸಿದು ಬಿದ್ದಿದೆ.
ಮಳೆಯಿಂದಾಗಿ ಕುಸಿದುಬಿದ್ದಿರುವ ದರ್ಗಾವನ್ನು ತಕ್ಷಣವೇ ಸರಿಪಡಿಸದೇ ಇದ್ದಲ್ಲಿ ಭಕ್ತಾದಿಗಳ ಮೇಲೆ ಮಣ್ಣು ಕುಸಿಯುವ ಸಾಧ್ಯತೆಯಿದ್ದು ಹಾನಿ ಸಂಭವಿಸುವ ಅಪಾಯವಿದೆ. ಶುಕ್ರವಾರ ರಾತ್ರಿ ದರ್ಗಾದ ಪೂರ್ವ ಭಾಗದ ಗೋಡೆ ಕುಸಿದು ಬಿದ್ದಿದೆ. ಗುಹೆಯಂತಿರುವ ದರ್ಗಾದಲ್ಲಿ ಸಂಭವಿಸಿದ ಕುಸಿತವನ್ನು ವೀಕ್ಷಿಸಿದ ಪರಿಣತರ ತಂಡ, ದರ್ಗಾ ರಕ್ಷಣೆಗೆ ತಕ್ಷಣವೇ ಕ್ರಮ ಕೈಗೊಳ್ಳದೇ ಇದ್ದರೆ ಇನ್ನಷ್ಟು ಕುಸಿತ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗೋಪುರದ ಮೇಲೆ ರಭಸವಾಗಿ ಹರಿಯುವ ನೀರನ್ನು ತಡೆಯಲು ನೀರಿನ ಟ್ಯಾಂಕ್ ನಿರ್ಮಿಸಬೇಕು. ಇದರಿಂದ ಗೋಪುರದಲ್ಲಿ ನೀರು ಸೋರುವುದನ್ನು ತಪ್ಪಿಸಿದಂತಾಗುತ್ತದೆ. ಸ್ಟೀಲ್ ಸಲಾಕೆಗಳನ್ನು ಗೋಪುರಕ್ಕೆ ಅಳವಡಿಸುವುದು ಸೂಕ್ತ ಎಂದು ಪರಿಣತರ ತಂಡ ಸರಕಾರಕ್ಕೆ ಸಲಹೆ ಮಾಡಿದೆ. ದತ್ತ ಪೀಠದ ಸ್ಥಿತಿಯ ಬಗ್ಗೆ ಇನ್ನಾರು ದಿನಗಳಲ್ಲಿ ತಜ್ಞರ ಸಮಿತಿ ಸಮಗ್ರ ವರದಿ ಸಲ್ಲಿಸಲಿದೆ. ಗೋಡೆ ಕುಸಿತವನ್ನು ರಿಪೇರಿ ಮಾಡಲು ಸುಮಾರು 15 ಲಕ್ಷ ರೂಪಾಯಿ ಖರ್ಚಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...