ಮರೂರು ಕೈಮರದ ಬಳಿ ಲಾರಿಗಳ ನಡುವೆ ವ್ಯಾನು ಅಪ್ಪಚ್ಚಿ, 5 ಸಾವು
ಬೆಂಗಳೂರು : ಮಂಗಳೂರು ರಸ್ತೆಯ ಮರೂರು ಕೈಮರದ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಸತ್ತಿದ್ದು, ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಮಾರುತಿ ವ್ಯಾನೊಂದು ವೇಗವಾಗಿ ಬಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಅದೇ ವ್ಯಾನಿನ ಹಿಂದೆ ಬರುತ್ತಿದ್ದ ಇನ್ನೊಂದು ಲಾರಿ ಕೂಡ ಚಾಲಕನ ನಿಯಂತ್ರಣ ಸಿಕ್ಕದೆ ವ್ಯಾನ್ಗೆ ಬಡಿಯಿತು. ಪರಿಣಾಮ ವ್ಯಾನು ಅಪ್ಪಚ್ಚಿ. ಈ ದುರಂತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು ಚಿಕ್ಕಮಗಳೂರಿನ ನಾರಾಯಣ, ಪಾಪಣ್ಣ, ಗುಂಡಪ್ಪ, ಚೆಲುವಯ್ಯ ಉರುಫ್ ಜಲ್ಲಿ ಮತ್ತು ಚಾಲಕ ರಾಜೀವ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಅಬಕಾರಿ ಗುತ್ತಿಗೆದಾರ ಕುಮಾರ ಸ್ವಾಮಿ ಹಾಗೂ ಅನಿಲ್ ಎಂಬುವರು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕ್ಕಮಗಳೂರಿಗೆ ಹೊರಟಿದ್ದ ವ್ಯಾನಿನಲ್ಲಿದ್ದವರು ಕುಡಿದಿದ್ದರು ಎಂದು ಕುದೂರು ಪೊಲೀಸರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...