ಕಡ್ಡಾಯ ಮದ್ಯ ಖರೀದಿಗೆ ಮದ್ಯ ಮಾರಾಟಗಾರರಿಂದ ವಿರೋಧ
ಬೆಂಗಳೂರು : ಮದ್ಯಮಾರಾಟಗಾರರು ಸರಕಾರದ ವಿರುದ್ಧ ಸಿಟ್ಟು ಮಾಡಿಕೊಂಡಿದ್ದಾರೆ. ನಿರ್ದಿಷ್ಟ ಪ್ರಮಾಣದ ಮದ್ಯವನ್ನು ಕಡ್ಡಾಯವಾಗಿ ಖರೀದಿಸಬೇಕು ಎಂಬ ಸರಕಾರದ ಆಗ್ರಹವನ್ನು ಮದ್ಯ ಮಾರಾಟಗಾರರು ತಿರಸ್ಕರಿಸಿದ್ದಾರೆ. ಹೀಗೆ ಕಡ್ಡಾಯ ನಿಯಮ ಹೇರುವುದನ್ನು ವಿರೋಧಿಸಿ ಜೂನ್ 1ರಂದು ಮದ್ಯಮಾರಾಟಗಾರರ ಒಕ್ಕೂಟ ಅರೆಬೆತ್ತಲೆ ರ್ಯಾಲಿ ನಡೆಸಲು ನಿರ್ಧರಿಸಿದೆ.
ಜಕ್ಕರಾಯನ ಕೆರೆಯಿಂದ ಹೊರಡುವ ರ್ಯಾಲಿ ನೇರ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೃಹ ಕಚೇರಿಯಲ್ಲಿ ಅಂತ್ಯಗೊಳ್ಳಲಿದೆ. ಸೆಕೆಂಡ್ಸ್ ಹಾವಳಿ ಜಾಸ್ತಿಯಾಗಿದೆ. ಸರಕಾರ ಮದ್ಯದ ಮೇಲಿನ ತೆರಿಗೆಯನ್ನೂ ಜಾಸ್ತಿ ಮಾಡಿದೆ. ಇದರಿಂದ ಕಾನೂನು ಬದ್ದವಾಗಿ ಮದ್ಯಮಾರಾಟ ಮಾಡುವವರಿಗೆ ತೊಂದರೆಯುಂಟಾಗಿದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಮದ್ಯ ಖರೀದಿಯನ್ನು ಕಡ್ಡಾಯ ಮಾಡಲು ನಿರ್ಧರಿಸಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಸಿ ಬಿ. ಗೋವಿಂದ ರಾಜ ಹೆಗ್ಡೆ ಸರಕಾರದ ಕ್ರಮವನ್ನು ದೂರಿದ್ದಾರೆ.
ಮೊದಲು ಮದ್ಯ ಖರೀದಿಗೆ ಪರ್ಮಿಟ್ ಸಲ್ಲಿಸದೇ ಮಾರಾಟಗಾರರು ಪ್ರತಿಭಟಿಸಲಿದ್ದಾರೆ. ನಂತರ ಜೂನ್ 7ರಂದು ಪರವಾನಗಿ ಇಲ್ಲದೆ ಮಾರಾಟ ಮಾಡುವವರ ವಿರುದ್ಧ ಚಳವಳಿ ನಡೆಸಲಾಗುವುದು ಎಂದು ಗೋವಿಂದ ರಾಜ ಹೆಗ್ಡೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...