ನಕ್ಕೀರನ್ಗೆ ವಕ್ಕರಿಸಿದ ಗ್ರಹಚಾರ ; ಪೊಲೀಸರಿಂದ ನೋಟೀಸ್
ಬೆಂಗಳೂರು : ಡಾ. ರಾಜ್ ಕುಮಾರ್ ಅಪಹರಣ ಪ್ರಕರಣದಲ್ಲಿ ನಕ್ಕೀರನ್ ತಮಿಳು ಪತ್ರಿಕೆಯ ಸಂಪಾದಕ ಗೋಪಾಲ್ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿದ್ದು, 10 ದಿನಗಳೊಳಗಾಗಿ ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ಗೋಪಾಲ್ಗೆ ಪೊಲೀಸರು ನೋಟೀಸ್ ನೀಡಿದ್ದಾರೆ.
ತಮಿಳುನಾಡಿನ ಬಂಗಳಾಪುದೂರು ಪೊಲೀಸ್ ಠಾಣೆ ಪೊಲೀಸರು ನಕ್ಕೀರನ್ ಗೋಪಾಲ್ಗೆ ಈ ನೋಟೀಸು ನೀಡಿದ್ದಾರೆ. ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ರಾಜ್ ಬಿಡುಗಡೆಗಾಗಿ ವೀರಪ್ಪನನ್ನು ಗೋಪಾಲ್ ಹಲವು ಬಾರಿ ಸಂಧಾನಕಾರರಾಗಿ ಭೇಟಿಯಾಗಿದ್ದರು. ವೀರಪ್ಪನ್ ಜೊತೆ ಗೋಪಾಲ್ಗೆ ಸಂಪರ್ಕವಿದೆ ಎನ್ನುವ ವದಂತಿಗಳೂ ಇದ್ದವು. ಆದರೆ ಇಷ್ಟು ಕಾಲ ಸುಮ್ಮನಿದ್ದ ಬಂಗಳಾಪುದೂರು ಪೊಲೀಸರು ಇದ್ದಕ್ಕಿದ್ದಂತೆಯೇ ಗೋಪಾಲ್ ಅವರನ್ನು ಆರೋಪಿಯೆಂದು ಪರಿಗಣಿಸಿ ನೋಟೀಸು ನೀಡಿದ್ದಾರೆ.
ಇನ್ನು 10 ದಿನಗಳ ಅವಧಿಯಾಳಗಾಗಿ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶರಣಾಗಬೇಕು. ಅಲ್ಲದೆ 15 ದಿನಗಳ ಕಾಲ ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ತಾಳವಾಡಿ ಪೊಲೀಸ್ಠಾಣೆಯಲ್ಲಿ ವಿಚಾರಣೆಗಾಗಿ ಖುದ್ದು ಹಾಜರಾಗಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ