ಸುಮ್ಮನಿರುವ ಬದಲು ಲಾಯ ಸುತ್ತು ; ಪಹರೆಗೆ ಐಎಎಸ್ ಅಧಿಕಾರಿ
ಬೆಂಗಳೂರು: ಸರಕಾರಿ ಅಧಿಕಾರಿಗಳು ಮನಸ್ಸಿಗೆ ಬಂದ ವೇಳೆಯಲ್ಲಿ ಕಚೇರಿಗೆ ಹಾಜರಾಗುವ ಉಡಾಫೆ ಪ್ರವೃತ್ತಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ತಕ್ಕ ಕ್ರಮ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳ ಹಾಜರಾತಿ ಪುಸ್ತಕದ ತಪಾಸಣೆಗೆ ಒಬ್ಬ ಐಎಎಸ್ ಅಧಿಕಾರಿಯನ್ನು ಸರಕಾರ ನೇಮಕ ಮಾಡಲಿದೆ.
ಆದರೆ ಸರಕಾರಿ ನೌಕರರ ಪ್ರಾಮಾಣಿಕತೆ ಪರೀಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಐಎಎಸ್ ಅಧಿಕಾರಿಯಾಬ್ಬರಿಗೆ ಉದ್ಯೋಗ ಸೃಷ್ಟಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರೇ ಸ್ವತಃ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
‘ಸರಕಾರ ಒಬ್ಬ ಐಎಎಸ್ ಅಧಿಕಾರಿಗೆ 24 ಸಾವಿರ ರೂಪಾಯಿ ಸಂಬಳ ನೀಡಬೇಕಾಗುತ್ತದೆ. ವಿಧಾನ ಸೌಧದಲ್ಲಿ ಮತ್ತು ರಾಜ್ಯ ಕಾರ್ಯದರ್ಶಿ ಕಚೇರಿಗಳಲ್ಲಿ ಬರಿಯ ಹಾಜರಾತಿ ಪುಸ್ತಕದಲ್ಲಿ ಹಾಕಿರುವ ಸಹಿಯನ್ನು ಪರೀಶೀಲಿಸುವುದಷ್ಟೇ ಆತನ ಕೆಲಸ. ಆದರೆ ಬೇರೆ ವಿಧಿಯಿಲ್ಲ ’ ಎಂದು ಕೃಷ್ಣ ಅಲವತ್ತುಕೊಂಡರು.
ಸರಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿಯನ್ನು ಕ್ರಮಬದ್ಧಗೊಳಿಸಲು ಕಳದ ವರ್ಷ ಕೃಷ್ಣ ಸರಕಾರ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜ್ಯದ ಪರಿಸ್ಥಿತಿಯ ಬಗ್ಗೆ ವಿವರಿಸುತ್ತ ಕೃಷ್ಣ , ಅಗತ್ಯವನ್ನು ಸರಿಯಾಗಿ ಗಮನಿಸದೇ ಹೆಚ್ಚು ಹೆಚ್ಚು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿರುವುದು ರಾಜ್ಯಕ್ಕೆ ಹೊರೆಯೆನಿಸುತ್ತದೆ. ಈಗಾಗಲೇ 250 ಮಂದಿ ಐಎಫ್ಎಸ್ ಅಧಿಕಾರಿಗಳು ರಾಜ್ಯದಲ್ಲಿದ್ದಾರೆ. ಅವರಿಗೆ ಅಂತಹ ಪ್ರಮುಖ ಕೆಲಸವನ್ನೇನೂ ಹಚ್ಚಿಲ್ಲ. ಆದರೆ ತೆರಿಗೆದಾರರು ನೀಡಿರುವ ಹಣವನ್ನು ಸರಕಾರ ಅಂತಹ ಅಧಿಕಾರಿಗಳಿಗಾಗಿ ಖರ್ಚು ಮಾಡುತ್ತಿದೆ ಎಂದರು.
ಇನ್ನು ಮುಂದೆ ರಾಜ್ಯಕ್ಕೆ ಐಎಎಸ್,ಐಪಿಎಸ್ ಅಥವಾ ಐಎಫ್ಎಸ್ ಅಧಿಕಾರಿಗಳನ್ನು ನೇಮಿಸದಂತೆ ಕೋರಿ ಮುಖ್ಯ ಕಾರ್ಯದರ್ಶಿ ಎ. ರವೀಂದ್ರ ಅವರಿಗೆ ಪತ್ರ ಬರೆದಿದ್ದೇನೆ. ತಮಿಳುನಾಡು ಕೂಡ ಹೆಚ್ಚು ಹೆಚ್ಚು ಐಎಎಸ್ ಅಧಿಕಾರಿಗಳ ನೇಮಕವನ್ನು ವಿರೋಧಿಸಿತ್ತು ಎಂದು ಕೃಷ್ಣ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...