ಅನಕ್ಷರಸ್ಥರಿಗೆ ಪಾಠ ಮಾಡಲಿರುವ ಬೆಂಗಳೂರು ವಿವಿ ವಿದ್ಯಾರ್ಥಿಗಳು
ಬೆಂಗಳೂರು: ವಿದ್ಯಾರ್ಥಿಗಳನ್ನು ವಯಸ್ಕರ ಶಿಕ್ಷಣ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಶೈಕ್ಷಣಿಕ ಪರಿಷತ್ನ ಯೋಜನೆ ಈ ವರ್ಷದಿಂದಲೇ ಜಾರಿಗೆ ಬರಲಿದ್ದು, ಪ್ರಥಮ ಹಂತದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದಾರೆ.
ವಿವಿಯ ಕುಲಪತಿ ಡಾ. ಎಂ. ಎಸ್. ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರೂ ಅನಕ್ಷರಸ್ಥ ವಯಸ್ಕರಿಗೆ ಶಿಕ್ಷಣ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ರೂಪಿಸಲಾದ ಕರಡು ನಿಯಮಾವಳಿಯನ್ನು ಸಭೆ ಅಂಗೀಕರಿಸಿತು.
ಈ ಕಾರ್ಯಕ್ರಮದಡಿ ಬಿ.ಕಾಂ, ಬಿಎಸ್ಸಿ, ಬಿಎ. ವಿದ್ಯಾರ್ಥಿಗಳು ಕನಿಷ್ಠ 2 ರಿಂದ ಗರಿಷ್ಠ 5 ಮಂದಿ ವಯಸ್ಕರನ್ನು ಅಕ್ಷರಸ್ಥರನ್ನಾಗಿಸಬೇಕು. ಫಲಾನುಭವಿಗಳನ್ನು ವಿದ್ಯಾರ್ಥಿಗಳೇ ಗುರುತಿಸಿ ಕಾಲೇಜಿನಲ್ಲಿ ಅವರ ಹೆಸರು ದಾಖಲಿಸಬೇಕು. ವಿದ್ಯಾರ್ಥಿಗಳ ಮೌಲ್ಯಮಾಪನ ಕಾರ್ಯವನ್ನು ರಾಜ್ಯ ವಯಸ್ಕರ ಶಿಕ್ಷಣ ಇಲಾಖೆ ಮಾನದಂಡಗಳ ಪ್ರಕಾರ ಮಾಡಲಾಗುವುದು.
ಒಬ್ಬ ವ್ಯಕ್ತಿಯನ್ನು ಅಕ್ಷರಸ್ಥನನ್ನಾಗಿಸಿದರೆ ವಿದ್ಯಾರ್ಥಿಗೆ 5 ಅಂಕ ದೊರೆಯಲಿದೆ. ಒಟ್ಟು 25 ಅಂಕ ಗಳಿಸುವ ಅವಕಾಶ ಪ್ರತಿ ವಿದ್ಯಾರ್ಥಿಗಿದೆ. ಈ ಸಾಧನೆಯನ್ನು ಸ್ನಾತಕೋತ್ತರ ಪ್ರವೇಶ ಸಮಯದಲ್ಲಿ ಪರಿಗಣಿಸಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...