ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದೇ ಕಾರ್ಯದಲ್ಲಿ ನಾಲ್ವರು ಭಾಗಿಗಳಂತೆ.. ಹಾಗೆ ಪ್ರಶಸ್ತಿಯೂ !

By Staff
|
Google Oneindia Kannada News

*ಸಿ.ಎನ್‌. ಕೃಷ್ಣಮಾಚಾರ್‌

ಬರಹಗಾರನ ಸುತ್ತ ಆಸೆಗಳು ಹುತ್ತಗಟ್ಟುತ್ತವೆಯಂತೆ. ಈ ಮಾತು ಶತಮಾನಗಳ ಹಿಂದಿನದು. ಕವಿಗೆ ಯಶಸ್ಸು , ಹಣ, ವ್ಯವಹಾರ ಕೌಶಲದ ನಂತರವೇ ಶಿವೇತರ ಕ್ಷತಿ, ಸದ್ಯಃ ಪರನಿವೃತ್ತಿಯ ಚಿಂತೆ ! ಇದು ಸಲ್ಲದೆನ್ನುತ್ತಾನೆ ನಾಡೋಜ ಪಂಪ. ‘ಆದಿಪುರಾಣ’ದಲ್ಲಿ ಅವನಾಡಿರುವ ಮಾತು ಮನೋಜ್ಞ.

ಕವಿತೆಯಾಳಾಸೆಗೆಯ್ವ ಫಲಮಾವುದೊ ಪೂಜೆ
ನೆಗಳ್ತೆ ಲಾಭ ಮೆಂ
ಬಿವೆ ವಲಮಿಂದ್ರ ಪೂಜೆ ಭುವನಸ್ತುತಮಪ್ಪನೆಗಳ್ತೆ
ಮುಕ್ತಿ ಸಂ
ಭವಿಸುವ ಲಾಭಮೆಂಬಿವೆ ಜಿನೇಂದ್ರ
ಗುಣಸ್ತುತಿಯಿಂದೆ ತಾಮೆ
ಬಾರವೆ ಪೆರರೀವುದೇಂ ಪೆರರು ಮಾಡುವುದೇಂ
ಪೆರರಿಂದ ಮಪ್ಪುದೇಂ ।।

ಇಷ್ಟೂ ಹೇಳಿ, ತನ್ನ ಎರಡನೆಯ ಕಾವ್ಯ ‘ವಿಕ್ರಮಾರ್ಜುನ ವಿಜಯ’ವನ್ನು ದೊರೆ ಅರಿಕೇಸರಿಯ ಮುಖೋಲ್ಲಾಸಕ್ಕೆ ಮೀಸಲಿಟ್ಟಿದ್ದು ಸೋಜಿಗದ ಸಂಗತಿಯಲ್ಲವೇ ? ಬಿಟ್ಟೆನೆಂದರೂ ಬಿಡದೀ ಮಾಯೆ ! ಇದು ಅಂದಿನ ಕತೆ. ಆದರೆ ಇಂದು ಪ್ರಶಸ್ತಿ ಪ್ರದಾನವೇ ಶಂಕಾಸ್ಪದ.

ಆಂಗ್ಲ ವಾಙ್ಮಯದಲ್ಲಿ ಮೇರುಕವಿಗಳಿಗೆ , ಸಾಹಿತಿಗಳಿಗೆ ನೀಡುವ ನೊಬೆಲ್‌ ಪ್ರಶಸ್ತಿಯ ರೂವಾರಿ ಆಲ್‌ಫ್ರೆಡ್‌ ನೊಬೆಲ್‌. ಸ್ವತಃ ಸಾಹಿತ್ಯದ ಸೂಕ್ಷ್ಮತಂತುಗಳ ಮೇಲೆ ಬೆರಳಾಡಿಸಿರಲಾರ. ತನ್ನ ಖುಷಿಗೊಂದು ದತ್ತಿಯನ್ನು ಹುಟ್ಟು ಹಾಕಿದ. ಆದರ್ಶವಾದಿಗಳಿಗೆ ನೊಬೆಲ್‌ ಪಾರಿತೋಷಕ ನೀಡುವಂತೆ, ತೀರ್ಪುಗಾರರಿಗೆ ಸಲಹೆಯಿತ್ತು ಅದರಂತೆಯೇ ಕೊಡುವುದಾಗಿದ್ದರೆ Samuel Smiles Self Help ಗ್ರಂಥಕ್ಕೋ, Dale Carnegieಯ How to win Friends and Influence peopleಕೃತಿಗೋ ಅಥವಾ Dr. Spock ನ Baby Careಗೋ ಕೊಡಬೇಕಿತ್ತೆಂದೂ ವಾದಿಸುತ್ತಾರೆ ಖ್ಯಾತ ಕಾದಂಬರಿಕಾರ ಆರ್‌. ಕೆ. ನಾರಾಯಣ್‌. ಈ ಕೃತಿಗಳ ಸ್ಥೂಲ ಪರಿಚಯ ವಾದರೂ ನೊಬೆಲ್‌ ಪ್ರಶಸ್ತಿ ಪ್ರದಾಯಕರಿಗೆ ಇರಬೇಕೇ? ಇಲ್ಲವಾದರೆ ಅನರ್ಹರಿಗೆ ಸಲ್ಲುವ ಸಾಧ್ಯತೆ ಇದೆಯಲ್ಲವೇ ?

ನೊಬೆಲ್‌ ಪ್ರಶಸ್ತಿಯ ಬಗ್ಗೆ ಇರುವ ಮತ್ತೊಂದು ಆರೋಪವೆಂದರೆ ತೀರ್ಪುಗಾರರ ಕಣ್ಣಿಗೆ ಪೌರಸ್ತ್ಯ ಬರಹಗಾರರು ಬೀಳುವುದೇ ಇಲ್ಲ. ಇತ್ತೀಚೆಗೆ ಪ್ರಶಸ್ತಿ ಪಡೆದ ವಿ.ಎಸ್‌. ನೈಪಾಲ್‌ ಟ್ರಿನಿಡಾಡ್‌ನಲ್ಲಿ ಹುಟ್ಟದೆ ಭಾರತದ ಬಂಗಾರಪೇಟೆಯಲ್ಲೋ, ಬಸವನಗುಡಿಯಲ್ಲೋ ಹುಟ್ಟಿದ್ದರೆ ಬಹುಮಾನವನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಕ್ಕೆ ಸಾಧ್ಯವಿಲ್ಲ ಎನ್ನುವ ಸಿನಿಕರೂ ಇದ್ದಾರೆ !

ಪಂಪ, ಪುರಂದರ, ಕನಕರ ಕಾಲದಲ್ಲಿ ನೊಬೆಲ್‌ಗೆ ಸಾಟಿಯೆನಿಸುವ ಪಾರಿತೋಷಕ ಇತ್ತೋ ಇಲ್ಲವೋ, ಈಗಂತೂ ಅವರ ಹೆಸರಿನಲ್ಲಿ ಪ್ರಶಸ್ತಿಗಳು ದೊರೆಯುತ್ತಿವೆ. ಖ್ಯಾತ ಸರಸ ಪ್ರಬಂಧಕಾರ ಗೊರೂರು ಹೆಸರಿನಲ್ಲೇ ಒಂದು ಪ್ರಶಸ್ತಿ ಇದೆ. ಕೈಲಾಸಂ, ಬೀಚಿ, ರಾಶಿ, ರಾಜರತ್ನಂರ ಹೆಸರನ್ನುಳಿಸುವ ಸಂಮಾನವೂ ಇದ್ದೀತು. ಇದು ಆರೋಗ್ಯಕರ ಸಂಪ್ರದಾಯ. ಆದರೆ ಅಂತಹ ಗೌರವ ಸಲ್ಲುವವರ ಮತ್ತು ಸಲ್ಲಬೇಕೆಂದು ಶಿಫಾರಸು ಮಾಡುವವರ ಬಯಾಗ್ರಫಿ ಯಿಂದಲೇ ನಗೆಪಾಟಲಿಗೀಡಾದರೆ ? ಡಾ. ಜಿ.ಎಸ್‌. ಎಸ್‌. (ಪಂಪ ಪ್ರಶಸ್ತಿ)ಡಾ. ಎಂ. ಬಾಲಮುರಳಿ ಕೃಷ್ಣ (ಎಸ್‌. ವಿ. ಎನ್‌. ಪ್ರಶಸ್ತಿ)ಗೆ ಸಂದಂತೆ ಪುರಸ್ಕೃತರಿಂದಲೇ ಪ್ರಶಸ್ತಿಯ ಗೌರವ ಇಮ್ಮಡಿಸಬೇಕು.

ಯಾವುದೇ ಒಂದು ಮಹತ್ಕಾರ್ಯಕ್ಕೆ ಇಲ್ಲವೆ ಪಾಪಕೃತ್ಯಕ್ಕೆ ನಾಲ್ವರು ಭಾಗಿಗಳು- ಕರ್ತಾ ಕಾರಯಿತಾ ಚೈವ ಪ್ರೇರಕಶ್‌ ಚ ನುಮೋದಕಃ ।
ಪುಣ್ಯೇಚ ಪಾಪಕಾರ್ಯೇಚ ಚತ್ವಾರಃ ಸಮಭಾಗಿನಃ ।।

(ವಿಜಯ ಕರ್ನಾಟಕ)

Post your views

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X