‘ವಿಭಜಿಸಿ ಆಳಲು ಧರ್ಮವನ್ನೇ ಅಸ್ತ್ರವಾಗಿಸಿಕೊಂಡಬಿಜೆಪಿಗೆ ಧಿಕ್ಕಾರ’
ಬೆಂಗಳೂರು : ಅಲ್ಪ ಸಂಖ್ಯಾಕರ ಮೇಲೆ ದಾಳಿ ಮಾಡುವ ಮೂಲಕ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಹಿಂದೂಗಳಿಗೆ ಕಳಂಕ ತಂದಿದೆ ಎಂದು ಸಿಪಿಎಂ ಹಿರಿಯ ನಾಯಕ ಜ್ಯೋತಿಬಸು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾನುವಾರ ಜಾಥಾವೊಂದನ್ನು ಉದ್ದೇಶಿಸಿ ಮಾತಾಡುತ್ತಿದ್ದ ಬಸು, ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸ ಸೇರಿದಂತೆ ಯಾವ ತತ್ವಜ್ಞಾನಿಗಳೂ ಕೂಡ ಒಂದು ಧರ್ಮಕ್ಕಾಗಿ ಇನ್ನೊಂದು ಧರ್ಮವನ್ನು ಹಾಳುಗೆಡಹು ಎಂದು ಹೇಳಿಲ್ಲ. ನನ್ನ 64 ವರ್ಷಗಳ ರಾಜಕೀಯ ಜೀವನದಲ್ಲಿ ಯಾವತ್ತೂ ಎನ್ಡಿಎಯಂಥಾ ಕೋಮುವಾದಿ ಸರ್ಕಾರವನ್ನು ನೋಡಿಲ್ಲ. ಇದು ನಾಚಿಕೆಗೇಡಿನ ಸರ್ಕಾರ. ಬಿಜೆಪಿಗೆ ಪರ್ಯಾಯವಾಗಿ ಆಡಳಿತದ ಚುಕ್ಕಾಣಿ ಹಿಡಿಯಲು ತೃತೀಯ ರಂಗವನ್ನು ಬಲಪಡಿಸಬೇಕಾಗಿದೆ ಎಂದು ಕರೆ ಕೊಟ್ಟರು.
ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಒಬ್ಬನೇ ಒಬ್ಬ ನಾಯಕ ಬಿಜೆಪಿಯಲ್ಲಿಲ್ಲ. ಕನಿಷ್ಠ 24 ತಾಸು ದೇಶಕ್ಕಾಗಿ ಸೆರೆವಾಸ ಅನುಭವಿಸಿದ ಮುಖಂಡರು ಇರದ ಬಿಜೆಪಿಗೆ ದೇಶವನ್ನು ಒಡೆಯುವ ಯಾವುದೇ ನೈತಿಕ ಹಕ್ಕಿಲ್ಲ. ಪಠ್ಯ ಪುಸ್ತಕಗಳನ್ನು ಬದಲಾಯಿಸುವುದೂ ಸೇರಿದಂತೆ ನಾಗರಿಕರಲ್ಲಿ ಕಂದಕ ತೋಡಲು ಧರ್ಮವನ್ನೇ ಸಲಕರಣೆಯಾಗಿಸಿಕೊಂಡಿರುವ ಬಿಜೆಪಿ ಯಾವುದೇ ಕಾರಣಕ್ಕೆ ದೇಶವನ್ನು ಒಡೆಯಲು ನಾವು ಬಿಡುವುದಿಲ್ಲ ಎಂದು ಸಿಪಿಎಂನ ಇನ್ನೊಬ್ಬ ಹಿರಿಯ ನಾಯಕ ಹರ್ಕಿಷನ್ ಸಿಂಗ್ ಸುರ್ಜಿತ್ ಕಿಡಿ ಕಾರಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...