ಭಾರತದಲ್ಲಿ ವಿಶ್ವಬ್ಯಾಂಕ್ನ ದೊಡ್ಡ ಫಲಾನುಭವಿಯಾಗಿ ಕರ್ನಾಟಕ
ಬೆಂಗಳೂರು: ಕೇಂದ್ರ ಸರ್ಕಾರದಿಂದ ನೆರವು ಪಡೆಯುವಲ್ಲಿ ಕರ್ನಾಟಕ ಭಾರೀ ವೈಫಲ್ಯ ಎದುರಿಸುತ್ತಿದ್ದರೂ, ವಿಶ್ವಬ್ಯಾಂಕ್ ನೆರವು ಪಡೆಯುವಲ್ಲಿ ಮಾತ್ರ ದಾಖಲೆ ಸ್ಥಾಪಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ವಿಶ್ವಬ್ಯಾಂಕ್ನಿಂದ ದೇಶದಲ್ಲಿಯೇ ಅತಿ ಹೆಚ್ಚು ನೆರವು ಗಿಟ್ಟಿಸಿಕೊಂಡ ರಾಜ್ಯ ಕರ್ನಾಟಕ.
ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸುಮಾರು ಒಂದು ಬಿಲಿಯನ್ ಡಾಲರ್ನಷ್ಟು ಸಾಲ ಪಡೆಯಲಾಗಿದೆ. ರಾಜ್ಯದ ಆರ್ಥಿಕ ಕ್ಷೇತ್ರದಲ್ಲಿನ ಸುಧಾರಣಾ ಕಾರ್ಯಗಳು, ವಿದ್ಯುತ್ ಕಳ್ಳತನ ನಿಯಂತ್ರಣಕ್ಕೆ ಕಾಯ್ದೆ, ಆಡಳಿತ ಸುಧಾರಣೆಯಿಂದಾಗಿ ರಾಜ್ಯವು ವಿಶ್ವಬ್ಯಾಂಕ್ನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಕೆರೆ ಅಭಿವೃದ್ಧಿ, ರಸ್ತೆ ಅಗಲೀಕರಣ ಮತ್ತು ಆರ್ಥಿಕ ಸುಧಾರಣೆಗಳಿಗಾಗಿ ವಿಶ್ವಬ್ಯಾಂಕ್ ರಾಜ್ಯಕ್ಕೆ ನೆರವು ನೀಡಿದೆ. ಈ ವಲಯದಲ್ಲಿ ರಾಜ್ಯದ ಕಾರ್ಯಗಳು ತೃಪ್ತಿಕರವಾಗಿದೆ. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಆಡಳಿತಾತ್ಮಕ ಕಾರ್ಯಗಳೂ ಕೂಡ ಶ್ಲಾಘನಾರ್ಹವಾಗಿವೆ. ಮುಖ್ಯವಾಗಿ ಐಟಿಯನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಪ್ರೋತ್ಸಾಹಿಸುವಂತಹುದು ಎಂದು ಗುರುವಾರ ರಾಜ್ಯಕ್ಕೆ ಭೇಟಿ ನೀಡಿದ ವಿಶ್ವಬ್ಯಾಂಕ್ನ ದೇಶೀಯ ನಿರ್ದೇಶಕ ಎಡ್ವಿನ್ ಲಿಮ್ ಹೇಳಿದರು.
ಆದರೆ ವಿದ್ಯುತ್ ಕ್ಷೇತ್ರದಲ್ಲಿ ಮಾತ್ರ ಆಂಧ್ರಪ್ರದೇಶ ಹಾಗೂ ರಾಜಸ್ತಾನಕ್ಕಿಂತಲೂ ರಾಜ್ಯ ಹಿಂದುಳಿದಿದ್ದು , ಉತ್ತಮ ನಿಯಂತ್ರಣ ವ್ಯವಸ್ಥೆಯ ಅಗತ್ಯವಿದೆ. ವಿದ್ಯುತ್ ದರ ಏರಿಕೆಯ ವಿಷಯದಲ್ಲಿ ರಾಜಕೀಯವನ್ನು ತೂರಿಸಬಾರದು ಎಂದು ಎಡ್ವಿನ್ ಸಲಹೆಯಿತ್ತರು.
ರಾಜ್ಯವು ಸಾಲದ ಉರುಳಲ್ಲಿ ಸಿಕ್ಕಿ ಬಿದ್ದಿದೆ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಪ್ರಸ್ತಾಪಿಸಿದ ಎಡ್ವಿನ್, ಹಣವನ್ನು ಗ್ರಾಹಕರೂಪದಲ್ಲಿ ಬಳಸಿದರೆ ಕಷ್ಟವಾಗುತ್ತದೆ . ಆದರೆ ರಾಜ್ಯವು ರಸ್ತೆ, ನೀರಿನಂತಹ ಮೂಲಭೂತ ಸೌಕರ್ಯಗಳಿಗೆ ಬಳಸುತ್ತಿರುವುದರಿಂದ ಸಮಸ್ಯೆ ಉದ್ಭವಿಸಲಾರದು ಎಂದು ಭರವಸೆ ಇತ್ತರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...