‘2 ತಿಂಗಳಲ್ಲಿ ಪಾಕಿಸ್ತಾನ ತಿದ್ದಿಕೊಳ್ಳಲಿ, ಇಲ್ಲವಾದರೆ ಯುದ್ಧ ಶತಸಿದ್ಧ’
ನವದೆಹಲಿ : ಇನ್ನು ಎರಡು ತಿಂಗಳು ಕಾಯುತ್ತೇವೆ. ಅಷ್ಟರಲ್ಲಿ ಭಯೋತ್ಪಾದನೆ ಪೂರ್ತಿ ಮಾಯವಾಗಿರಬೇಕು. ಇಲ್ಲವಾದರೆ ಯುದ್ಧ ಗ್ಯಾರಂಟಿ ಅಂತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನಕ್ಕೆ ಗಡುವು ಕೊಟ್ಟಿದ್ದಾರೆ !
ಈ ಬಗ್ಗೆ ಅಧಿಕೃತ ವರದಿ ಹೊರ ಬಿದ್ದಿಲ್ಲವಾದರೂ, ನಂಬಲರ್ಹ ಕಚೇರಿ ಮೂಲಗಳು ವಾಜಪೇಯಿಯವರ ಈ ನಿಲುವನ್ನು ಸ್ಪಷ್ಟಪಡಿಸಿವೆ. ಒಂದು ದಿನಪತ್ರಿಕೆಯಲ್ಲೂ ಈ ವರದಿ ಪ್ರಕಟವಾಗಿದೆ. ರಕ್ಷಣೆಗೆ ಸಂಬಂಧಪಟ್ಟ ಸಚಿವ ಸಂಪುಟದ ಸಭೆಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ಗೆ ಇನ್ನೂ ಎರಡು ತಿಂಗಳು ಗಡುವು ಕೊಡುವುದಾಗಿ ತೀರ್ಮಾನಿಸಲಾಗಿದೆ. ಅಷ್ಟರಲ್ಲಿ ಮಾತು ಕೊಟ್ಟಿರುವಂತೆ ಭಯೋತ್ಪಾದನೆ ನಿಗ್ರಹಿಸಿದರೆ ಒಳ್ಳೆಯದು. ಇಲ್ಲವಾದರೆ ಭಾರತ ತಕ್ಕ ಶಾಸ್ತಿ ಮಾಡಲಿದೆ ಎಂಬುದು ಸಭೆಯಲ್ಲಿ ಕೇಳಿಬಂದ ಸೊಲ್ಲು.
ಪಾಕಿಸ್ತಾನದ ಕುಮ್ಮಕ್ಕಿನಿಂದ ಅನೇಕರು ಲಕ್ಷ್ಮಣ ರೇಖೆಯನ್ನು ದಾಟಿ, ಭಯೋತ್ಪಾದನೆಯನ್ನು ಮುಂದುವರೆಸಿದ್ದಾರೆ. ಗಡಿ ಪ್ರದೇಶದ ಸುಮಾರು 30 ರಿಂದ 40 ಸಾವಿರ ಮಂದಿ ಸುರಕ್ಷಿತ ಸ್ಥಳಗಳಿಗೆ ಗುಳೇ ಹೊರಟಿದ್ದಾರೆ. ಹೀಗಿದ್ದೂ ಪಾಕಿಸ್ತಾನಕ್ಕೆ ಕೊನಯ ಅವಕಾಶ ನೀಡುತ್ತಿದ್ದೇವೆ ಎಂದು ವಾಜಪೇಯಿ ಹೇಳಿರುವುದಾಗಿ ವರದಿಯಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...