ಅಡಿಕೆ ರೈತರ ರಕ್ಷಣೆಗೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ
ಶಿವಮೊಗ್ಗ : ಅಡಿಕೆ ಮಾರುಕಟ್ಟೆ ಬೆಳೆಗಾರರ ಮಾರುಕಟ್ಟೆಯಾಗಬೇಕೇ ಹೊರತು ಮಧ್ಯವರ್ತಿಗಳ ಮಾರುಕಟ್ಟೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲು ರಾಜ್ಯ ಅಡಿಕೆ ಬೆಳೆಗಾರರ ಒಕ್ಕೂಟದ ವತಿಯಿಂದ ರಾಜ್ಯ ಅಡಿಕೆ ಬೆಳೆಗಾರರ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಈ ಹೊಸ ಸಂಘದ ಉದ್ಘಾಟನೆಯನ್ನು ಈ ವರ್ಷ ನಡೆಯಲಿರುವ ಅಡಿಕೆ ಬೆಳೆಗಾರರ ರಾಜ್ಯ ಸಮಾವೇಶದಲ್ಲಿ ಉದ್ಘಾಟಿಸಲಾಗುವುದು ಎಂದು ರಾಜ್ಯ ಅಡಿಕೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಲಿ ಬೆಳೆಗಾರರ ಪರವಾಗಿ ಮಾರುಕಟ್ಟೆಯಲ್ಲಿ ಅಡಿಕೆ ಖರೀದಿಸುತ್ತಿರುವ ಕ್ಯಾಂಪ್ಕೋ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ 15ರಷ್ಟು ಮಾತ್ರ ಖರೀದಿಸಲು ಶಕ್ತವಾಗಿದೆ. ಉಳಿದಂತೆ ಮ್ಯಾಮ್ಕೋಸ್, ತುಮ್ಕೋಸ್, ಆಪ್ಸ್ಕೋಸ್ ಸಂಸ್ಥೆಗಳು ದಲ್ಲಾಳಿ ಕಾರ್ಯ ನಿರ್ವಹಿಸುತ್ತವೆ. ಇವೆಲ್ಲದರ ಪ್ರತಿನಿಧಿಯಾಗಿ ಇನ್ನೊಂದು ಖರೀದಿ ಸಂಸ್ಥೆಯನ್ನು ಆರಂಭಿಸಲು ಉದ್ದೇಶಿಸಲಾಗಿದೆ.
ಈ ನಡುವೆ ಎಲ್ಲ ರೀತಿಯ ಅಡಿಕೆಗೂ ಬೆಂಬಲ ಬೆಲೆ ನೀಡುವ ಹಾಗೂ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಡಿಕೆಬೆಳೆಗಾರರ ಒಕ್ಕೂಟದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಶಿವಮೊಗ್ಗದಲ್ಲಿ ಜೂನ್ ಮೊದಲ ವಾರದಲ್ಲಿ ನಡೆಯಬೇಕಿದ್ದ ಅಡಿಕೆ ಬೆಳೆಗಾರರ ಸಮಾವೇಶವನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ ಸಮಾವೇಶ ನಡೆಸಲಾಗುವುದು ಎಂದು ಮಂಜುನಾಥ ಗೌಡ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...