ಬೆಂಗಳೂರಲ್ಲಿ 120 ಬಾಲ ಕಾರ್ಮಿಕರಿಗೆ ಕೆಲಸದಿಂದ ಮುಕ್ತಿ
ಬೆಂಗಳೂರು : ಹಲವು ವರ್ಷಗಳಿಂದ ಚಾಕರಿ ಮಾಡಿ ಮಾಡಿ ದಣಿದಿದ್ದ ಕೆಲವು ಮಕ್ಕಳು ಕಷ್ಟದಿಂದ ಮುಕ್ತಿ ಸಿಕ್ಕಿದ್ದಕ್ಕೆ ಕುಣಿದಾಡಿದರು. ಇನ್ನು ಕೆಲವರು ನೀವು ಕೆಲಸ ಕೊಡ್ತೀರೇನ್ರೀ ಅಂತ ಅಧಿಕಾರಿಗಳನ್ನು ನೇರವಾಗಿ ಕೇಳಿದರು ! ಇವರೆಲ್ಲಾ ಅಧಿಕಾರಿಗಳ ದಾಳಿಯಲ್ಲಿ ಸಿಕ್ಕ ಬಾಲ ಕಾರ್ಮಿಕರು.
ಜಿಲ್ಲಾಧಿಕಾರಿ ಡಾ.ಡಿ.ಎಸ್.ಅಶ್ವತ್ಥ್ ನಗರದ ನಗರ್ತಪೇಟೆಯಲ್ಲಿ ಗುರುವಾರ ಹಠಾತ್ ದಾಳಿ ಮಾಡಿ, ಪತ್ತೆ ಮಾಡಿದ ಬಾಲ ಕಾರ್ಮಿಕರ ಸಂಖ್ಯೆ 120ಕ್ಕೂ ಹೆಚ್ಚು. ಇವರೆಲ್ಲಾ ತಮಿಳುನಾಡು, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಕರ್ನಾಟಕದ ವಿವಿಧ ಭಾಗಗಳವರು. ಚಿನ್ನದಂಗಡಿ, ಹೊಟೇಲುಗಳು, ದಿನಸಿಯಂಗಡಿಗಳು, ಪ್ಲಾಸ್ಟಿಕ್ ಅಂಗಡಿಗಳು ಹಾಗೂ ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದವರು.
ಈ ಮಕ್ಕಳಿಗೆ ಸದ್ಯಕ್ಕೆ ವಾಸ ಎಲ್ಲಿ ಎಂದು ಸುದ್ದಿಗಾರರು ಕೇಳಿದಾಗ, ಬಳ್ಳಾರಿ ರಸ್ತೆಯ ಮೊರಾರ್ಜಿ ದೇಸಾಯಿ ಕಾರ್ಪೊರೇಷನ್ ಬಾಲಕರ ಶಾಲೆ, ಅಪ್ಸಾ ಸಂಸ್ಥೆ ಹಾಗೂ ರಿಮ್ಯಾಂಡ್ ಹೋಂಗಳಲ್ಲಿ ತಂಗಲು ವ್ಯವಸ್ಥೆ ಮಾಡುವುದಾಗಿ ಅಶ್ವತ್ಥ್ ಹೇಳಿದರು.
ಬಾಲ ಕಾರ್ಮಿಕ ಕಾಯ್ದೆ 17ರ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ. ಇದನ್ನು ಉಲ್ಲಂಘಿಸಿ, ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಕ್ರೀಂ ಹಾಗೂ ಅಪ್ಸಾ ಎಂಬ ಸಂಸ್ಥೆಗಳ ನೆರವಿನಿಂದ ಈ ಬಾಲ ಕಾರ್ಮಿಕರನ್ನು ಪತ್ತೆ ಮಾಡುವುದು ಸಾಧ್ಯವಾಯಿತು. ಕಳೆದ 2 ವರ್ಷಗಳಿಂದ ಚಿನ್ನದ ಕೆಲಸ ಮಾಡುತ್ತಿದ್ದ ಮೂವರು ಮಕ್ಕಳ ಮೈ ಕೈಯೆಲ್ಲಾ ಗುಳ್ಳೆ ಎದ್ದಿದೆ. ಇಂಥಾ ತೊಂದರೆ ಅನುಭವಿಸುವ ಇನ್ನಷ್ಟು ಬಾಲ ಕಾರ್ಮಿಕರಿಗೆ ಮುಕ್ತಿ ದೊರೆಯಬೇಕು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...