ಪಾಣೆಮಂಗಳೂರು : ನೇತ್ರಾವತಿ ಸೇತುವೆ ಕುಸಿತ, ಸಂಚಾರ ನಿಷೇಧ
ಬಂಟ್ವಾಳ : ಬೆಂಗಳೂರು ಹಾಗೂ ಮಂಗಳೂರು ನಡುವೆ ಸಂಪರ್ಕ ಬೆಸೆಯುವ ಮುಖ್ಯ ರಾಷ್ಟ್ರೀಯ ಹೆದ್ದಾರಿಯ ಪಾಣೆ ಮಂಗಳೂರು ಬಳಿಯ ನೇತ್ರಾವತಿ ಸೇತುವೆ ಬುಧವಾರ ಬೆಳಗ್ಗೆ ಕುಸಿದು ಬಿದ್ದಿದ್ದು ಏಳು ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
1914ರಲ್ಲಿ ನಿರ್ಮಾಣವಾದ ಈ ಸೇತುವೆಯ ಆಯುಷ್ಯ ಬಹಳ ಹಿಂದೆಯೇ ಮುಗಿದು ಹೋಗಿದ್ದರೂ, ಬದಲಿ ಸೇತುವೆ ನಿರ್ಮಾಣ ಕಾಮಗಾರಿ ತಡವಾಗಿದ್ದರಿಂದ ಹಳೇ ಸೇತುವೆಯಲ್ಲಿಯೇ ಭಾರೀ ಗಾತ್ರದ ವಾಹನಗಳು ಹಾಗೂ ಐಷರಾಮಿ ಬೆಂಗಳೂರು- ಮಂಗಳೂರು ಬಸ್ಸುಗಳು ಸಂಚರಿಸುತ್ತಿದ್ದವು. ಬುಧವಾರ ಮಧ್ಯಾಹ್ನ ಗ್ರಾನೈಟ್ ಲಾರಿಯಾಂದು ಚಲಿಸುತ್ತಿದ್ದಾಗ ಸೇತುವೆ ಅರ್ಧಚಂದ್ರಾಕಾರದಲ್ಲಿ ಸುಮಾರು 5 ಅಡಿಗಳಷ್ಟು ಜಗ್ಗಿ ಕುಳಿತಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮಂಗಳೂರು ಉಪವಿಭಾಗ ಇಂಜಿನಿಯರ್ ಎನ್. ಎಲ್. ಆರ್. ಪೇಶ್ವೆ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ , ಸಹಾಯಕ ಇಂಜಿನಿಯರ್ ಧರ್ಮರಾಜ್ ಸ್ಥಳಕ್ಕೆ ಭೇಟಿ ನೀಡಿದ್ದು, ಇನ್ನು ಏಳು ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದ್ದಾರೆ.
ಸೇತುವೆ ಕುಸಿದಿರುವುದರಿಂದ ಬಂಟ್ವಾಳ ತಾಲ್ಲೂಕಿನ ಮುಖ್ಯ ವಾಣಿಜ್ಯ ನಗರಿ ಬಿ.ಸಿ. ರೋಡ್ ಮತ್ತು ಪಾಣೆ ಮಂಗಳೂರು ವಲಯದ ನಡುವಿನ ಸಂಪರ್ಕ ಕಷ್ಟವಾಗಿದೆ. ಜನರು ಬ್ರಹ್ಮರ ಕೂಟ್ಲು, ಸಜೀಪ, ತಲಪಾಡಿಯಲ್ಲಿ ಹಿಂದಿನಿಂದಲೂ ನಡೆದು ಬಂದಿದ್ದ ದೋಣಿ ಸಂಚಾರವನ್ನೇ ಆಶ್ರಯಿಸುವಂತಾಗಿದೆ.
ಈ ನಡುವೆ ಮಳೆಗಾಲವೂ ನಿಧಾನವಾಗಿ ಕಾಲಿಟ್ಟಿದ್ದು ನದಿ ನೀರಿನ ಪ್ರಮಾಣ ದೋಣಿ ಸಂಚಾರಕ್ಕೆ ಪೂರಕವಾಗಿಲ್ಲ. ಬಸ್ಸುಗಳು ಮಂಗಳೂರಿನಿಂದ ಹೊರಟು ಮಂಗಳೂರು ವಿಶ್ವ ವಿದ್ಯಾಲಯ ಮತ್ತು ಮುಡಿಪುವಿನ ಬಳಸು ದಾರಿಯ ಮೂಲಕ ಪುತ್ತೂರಿಗೆ ಸಂಚರಿಸುತ್ತಿವೆ. ಬದಲಿ ಸೇತುವೆಯ ಕಾಮಗಾರಿ ತೀರಾ ನಿಧಾನ ಗತಿಯಲ್ಲಿ ಸಾಗಿದ್ದು ಪೂರ್ಣಗೊಳ್ಳಲು ಇನ್ನೂ ಕನಿಷ್ಠ ಆರು ತಿಂಗಳ ಅವಧಿ ಬೇಕು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...