ಮತ್ತೆ ಸಿಕ್ಕಿಬಿದ್ದ ವಿಕೃತ ಕಾಮಿ, ಆಟೋ ಚಾಲಕನ ವಿಕ್ರಮಕ್ಕೆ 20 ಸಾವಿರ !
ಬೆಂಗಳೂರು : ಐದು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ವಿಕೃತ ಕಾಮಿ, ಶವ ಸಂಭೋಗಿ, ಕುಖ್ಯಾತ ಕೊಲೆಗಾರ ಉಮೇಶ್ ರೆಡ್ಡಿಯನ್ನು ಶುಕ್ರವಾರ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರ ಠಾಣೆ ಡಿಸಿಪಿ (ಉತ್ತರ) ಎಸ್.ಕೆ.ವೇಣುಗೋಪಾಲ್ ಹಾಗೂ ಎಸಿಪಿ ಬಿ.ತಿಮ್ಮಪ್ಪ ನೇತೃತ್ವದ ಪೊಲೀಸರ ತಂಡ ಬಾತ್ಮೀದಾರರ ಸತತ ಸಂಪರ್ಕದ ಮಾಹಿತಿ ಮೇರೆಗೆ ಉಮೇಶ್ ರೆಡ್ಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಮುಂಜಾನೆ ಸುಮಾರು 7.45 ಗಂಟೆ ಹೊತ್ತಿಗೆ ಯಶವಂತಪುರ ಪೊಲೀಸ್ ಠಾಣೆಗೆ ಸಮೀಪದ ಸಲೂನ್ನಲ್ಲಿ ಶೇವ್ ಮಾಡಿಸಿಕೊಂಡು, ತಿಂಡಿ ತಿನ್ನಲು ಹೊಟೇಲೊಂದಕ್ಕೆ ಉಮೇಶ್ ರೆಡ್ಡಿ ಹೋದ. ಇವನನ್ನು ಗುರುತಿಸಿದ ಆಟೋ ಚಾಲಕನೊಬ್ಬ ನಿಗಾ ಇಟ್ಟು, ತನ್ನ ತಂದೆ ಮತ್ತು ಸೋದರನ ಸಹಾಯದಿಂದ ಮೂಲಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ.
ಎಎಸ್ಐ ಶ್ರೀನಿವಾಸಯ್ಯ, ಬಸವರಾಜಯ್ಯ, ಎಚ್.ಜೆ.ಮಂಜಯ್ಯ, ಚನ್ನರಂಗಯ್ಯ ಹಾಗೂ ಚಂದ್ರಶೇಖರಯ್ಯ ಪೊಲೀಸ್ ತಂಡದಲ್ಲಿದ್ದ ಸಾಹಸಿಗರು. 38ರ ಹರೆಯದ ಉಮೇಶ್ ರೆಡ್ಡಿ 2 ಕೊಲೆ, 3 ಅತ್ಯಾಚಾರ, 7 ಸುಲಿಗೆ, 8 ಇತರೆ ಹಾಗೂ ಬರೋಡಾದಲ್ಲಿ 2 ಪ್ರಕರಣಗಳ ವಿಚಾರಣಾಧೀನ ಕೈದಿಯಾಗಿದ್ದ. ಕಳೆದ ಮಾರ್ಚ್ 7ನೇ ತಾರೀಖು ಬೆಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲು ಬಳ್ಳಾರಿ ಜೈಲಿನಿಂದ ಕರೆ ತರುತ್ತಿರುವಾಗ ಉಮೇಶ್ ರೆಡ್ಡಿ ತಪ್ಪಿಸಿಕೊಂಡಿದ್ದ.
ತಪ್ಪಿಸಿಕೊಂಡಾಗಿನಿಂದ 3 ಅತ್ಯಾಚಾರ ಮತ್ತು 2 ಕಳವು ಪ್ರಕರಣಗಳನ್ನು ಈತ ಎಸಗಿದ್ದಾನೆ ಎನ್ನಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ರೆಡ್ಡಿಯ ಹಿಡಿದುಕೊಟ್ಟವರಿಗೆ ಬಹುಮಾನ : ಉಮೇಶ್ ರೆಡ್ಡಿಯನ್ನು ಬಂಧಿಸುವಲ್ಲಿ ನೆರವಾಗಿರುವ ಆಟೋ ಚಾಲಕ, ಆತನ ತಂದೆ ಮತ್ತು ಸೋದರನ ಪ್ರಯತ್ನವನ್ನು ಶ್ಲಾಘಿಸಿರುವ ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ, ಇವರಿಗೆ 20 ಸಾವಿರ ರುಪಾಯಿ ಬಹುಮಾನ ಘೋಷಿಸಿದ್ದಾರೆ.
ಇನ್ನು ಮುಂದೆ ಕಮಾಂಡೋಗಳ ಸುಪರ್ದಿಯಲ್ಲೇ ಉಮೇಶ್ ರೆಡ್ಡಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಪೊಲೀಸರು ವಿಚಾರಣೆ ನಡೆಸಿದ್ದು, ತಪ್ಪಿಸಿಕೊಂಡ ನಂತರ ತಾನು ಬೆಳಗಾವಿ, ಮುಂಬಯಿ ಹಾಗೂ ಪುಣೆಯಲ್ಲಿ ಇದ್ದುದಾಗಿ ಉಮೇಶ್ ರೆಡ್ಡಿ ಒಪ್ಪಿಕೊಂಡಿದ್ದಾನೆ. ತಪ್ಪಿಸಿಕೊಂಡ ನಂತರ ಮೂವರು ಹೆಂಗಸರ ಮೇಲೆ ಈತ ಅತ್ಯಾಚಾರ ನಡೆಸಿದ್ದು, ಯಾರನ್ನೂ ಕೊಂದಿಲ್ಲ. ಈ ಮೊದಲು ಉಮೇಶ್ ರೆಡ್ಡಿ ಅತ್ಯಾಚಾರ ಎಸಗಿದ ಹೆಂಗಸರನ್ನು ಕೊಲ್ಲುತ್ತಿದ್ದ. ಲಾರಿಯಲ್ಲಿ ಯಶವಂತಪುರಕ್ಕೆ ಬಂದ ರೆಡ್ಡಿ, ಶೇವ್ ಮಾಡಿಸಿಕೊಂಡು ರೈಲಿನ ಮೂಲಕ ಮುಂದಿನ ಪ್ರಯಾಣಕ್ಕೆ ಸಜ್ಜಾಗುತ್ತಿದ್ದ ಎಂದು ಸಾಂಗ್ಲಿಯಾನ ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...