ಕಿರೀಟ ಇಟ್ಕೊಂಡ ಸ್ವಾಮೀಜಿಗಳು ಸಮಾಜ ಸುಧಾರಣೆ ಮಾಡ್ತಾರಾ?
ಬೆಂಗಳೂರು: ಸ್ವಾಮೀಜಿಗಳು ಸರಳ ಜೀವನದ ಪ್ರತೀಕವಾಗಿರಬೇಕು. ಸಮಾಜ ಸುಧಾರಣೆಯನ್ನು, ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನವನ್ನು ನೀಡುವ ಹೊಣೆ ಹೊತ್ತಿರುವ ಸ್ವಾಮೀಜಿಗಳಿಗೆ ಚಿನ್ನದ ಕಿರೀಟಗಳು ಯಾಕೆ ಬೇಕು ಎಂದು ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಪ್ರಶ್ನಿಸಿದ್ದಾರೆ.
ನರಸಿಂಹಯ್ಯ ಅವರು ಮಂಗಳವಾರ ರಾಷ್ಟ್ರೀಯ ಬಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು. ಸಮಾಜವನ್ನು ಜಾತಿಯ ಸಂಕೋಲೆಯಿಂದ ಬಿಡಿಸಲು ಸ್ವಾಮೀಜಿಗಳು ಮುಂದಾಗಬೇಕೇ ಹೊರತು ಜಾತೀಯತೆಯನ್ನೇ ಬೆಂಬಲಿಸಬಾರದು. ಧರ್ಮವನ್ನು ವಾಣಿಜ್ಯೀಕರಣಗೊಳಿಸುವುದು ಅಪಾಯಕಾರಿ ಕೆಲಸ ಎಂದು ಎಚ್ಚೆನ್ ಎಚ್ಚರಿಸಿದರು.
ಮಠಗಳ ಬಗ್ಗೆ ಅವಹೇಳನಕಾರಿ ಮಾತನಾಡುವುದು ತರವಲ್ಲ. ಆದರೆ ಮಠಗಳಿಗೆ ಬೆಳ್ಳಿ ರಥ, ಚಿನ್ನದ ರಥ, ಕಿರೀಟಗಳು ಏಕೆ ಬೇಕು ಎಂದು ಪ್ರಶ್ನಿಸಿದ ಎಚ್ಚೆನ್, ಸುಧಾರಣೆಯನ್ನು ಬಿಟ್ಟು ಕೇವಲ ಹಿಂದಿನ ಸಂಪ್ರದಾಯವನ್ನೇ ಬೆಳೆಸಿಕೊಂಡು ಹೋಗಬಾರದು. ಸ್ವಾಮೀಜಿಗಳು ಕಿರೀಟ ಸಂಪ್ರದಾಯವನ್ನು ಬಿಟ್ಟು ಆಚೆಗೆ ಬರಬೇಕು ಎಂದು ಕರೆ ನೀಡಿದರು.
ಜಾತಿಯ ಹಂಗಿಲ್ಲದೆ ಸಮಾಜ ಸುಧಾರಣೆಗೆ ಯತ್ನಿಸಿದವರು ಬಸವಣ್ಣ. ಆದರೆ ಅದು ಈಗ ಲಿಂಗಾಯತ ಧರ್ಮವಾಗಿ, ಶಾಖೋಪಶಾಖೆಯಾಗಿ ಬೆಳೆಯುತ್ತಿರುವ ದುರಂತ. ಹಿಂದೂ ಧರ್ಮಕ್ಕೆ ಹುಟ್ಟಿದ ದಿನಾಂಕವಾಗಲೀ, ಸ್ಥಾಪಕರಾಗಲೀ ಇಲ್ಲ. ಅದು ಉದಾತ್ತವಾದ ಧರ್ಮ. ಆದರೆ ಈಗೀಗ ಅದು ಉದಾತ್ತತೆಯಿಂದ ದೂರ ಸರಿಯಲು ಪ್ರಯತ್ನಿಸುತ್ತಿದೆ ಎಂದು ಅವರು ವಿಷಾದಿಸಿದರು.
ಬಸವ ಪ್ರಶಸ್ತಿಯನ್ನು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಪ್ರದಾನ ಮಾಡಿದರು. ಸಂಸ್ಕೃತಿ ಸಚಿವೆ ರಾಣಿ ಸತೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...