ದವಡೆ ಮೂಳೆ ಮುರಿತದ ನಡುವೆಯೂ ಲಾರಾ ವಿಕೆಟ್ ಕಿತ್ತ ಕುಂಬ್ಳೆ
ಆ್ಯಂಟಿಗುವಾ : ವಿಂಡೀಸ್ನ ಮರ್ವಾನ್ ಧಿಲ್ಲಾನ್ ಎಸೆತ ಚಕ್ಕನೆ ಚಿಮ್ಮಿ ಆತನ ಗಲ್ಲಕ್ಕೆ ಬಡಿಯಿತು. ಬಾಯಲ್ಲಿ ರಕ್ತ. ದವಡೆಯ ಮೂಳೆ ಮುರಿದಿತ್ತು. ಆದರೂ ಬ್ಯಾಟಿಂಗ್ ಮುಂದುವರೆಸಿದ. ಗಳಿಸಿದ್ದು ಆರೇ ರನ್ನುಗಳಾದರೂ ಅಳುಕು ಕಿಂಚಿತ್ತೂ ಇರಲಿಲ್ಲ. ಆತ ಬೌಲ್ ಮಾಡಲು ಮೈದಾನಕ್ಕೆ ವಾಪಸ್ಸಾಗುವುದು ಸಾಧ್ಯವೇ ಇಲ್ಲ ಅಂದುಕೊಂಡಿದ್ದ ಎಲ್ಲರಿಗೂ ಅಚ್ಚರಿ. ಬ್ಯಾಂಡೇಜ್ ಸುತ್ತಿಕೊಂಡೇ ಚೆಂಡನ್ನು ಕೈಗೆತ್ತಿಕೊಂಡು, ಲಾರಾ ವಿಕೆಟ್ ಪಡೆದೇ ತೀರಿದ. ಈಗ ನಾನು ನೆಮ್ಮದಿಯಿಂದ ತವರಿಗೆ ಹಿಂದಿರುಗುವೆ ಎಂದು ಬೀಗಿದ.
ಮೋಸದಾಟದ ಕರಿ ಮೋಡ ಈಗೀಗ ಪಕ್ಕಕ್ಕೆ ಸರಿಯುತ್ತಿರುವ ಹೊತ್ತಲ್ಲೂ ಕ್ರಿಕೆಟ್ಟಿನ ಬಗ್ಗೆ ಈ ಪರಿಯ ಪ್ರೀತಿ, ಕಮಿಟ್ಮೆಂಟು ತೋರಿರುವ ಆಟಗಾರ ಕರ್ನಾಟಕದವ ಎಂಬುದು ನಮ್ಮ ಹೆಮ್ಮೆ. ಆತನೇ ಟೆಸ್ಟ್ ಕ್ರಿಕೆಟ್ನಲ್ಲಿ 300ಕ್ಕೂ ಹೆಚ್ಚು ವಿಕೆಟ್ ಕಿತ್ತಿರುವ ಲೆಗ್ಗಿ ಮೋಡಿಗಾರ ಅನಿಲ್ ಕುಂಬ್ಳೆ !!
ವಿಂಡೀಸ್ ವಿರುದ್ಧದ 4ನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನ, ಶನಿವಾರ ಮರೆಯಲಾರದ ದಿನ. ಏನೆಲ್ಲಾ ಮುಳ್ಳಿನ ಹಾದಿಯಿದ್ದರೂ ಕುಂಬ್ಳೆ ಛಲ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ದಿನದ ಕೊನೆಗೆ ದವಡೆ ನೋವು ಉಲ್ಬಣಿಸಿದ್ದು, ಹತಾಶೆ- ನೋವನ್ನು ನುಂಗಿಕೊಂಡೇ ನಕ್ಕರು! ನೋವಿನ ನಡುವೆಯೂ ಮಾತಾಡಿದರು...
ನಾನು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ವಿಂಡೀಸ್ ಪ್ರವಾಸಕ್ಕೆ ಬಂದಿದ್ದೆ. ಆದರೆ ಆದದ್ದು ನಿರಾಸೆ. ಈ ನಿರಾಸೆಯಿಂದ ಹೊರ ಬರಲು ಸಿಕ್ಕ ಒಂದು ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಸಿದ್ಧನಿರಲಿಲ್ಲ. ಟ್ರಿನಿಡ್ಯಾಡ್ ಹಾಗೂ ಬಾರ್ಬಡೋಸ್ನಲ್ಲಿ ಅವಕಾಶ ವಂಚಿತನಾದೆ. ಈಗ ಸಿಕ್ಕಿದ್ದು ಒಂದು ವಿಧದಲ್ಲಿ ಸುವರ್ಣಾವಕಾಶ. ಗಾಯಾಳಾಗಿ ಇದೇ ಮೊದಲ ಬಾರಿಗೆ ಫೀಲ್ಡಿಗೆ ಹೋಗಿದ್ದು. ನರ್ವಸ್ ಆಗಿದ್ದೆ. ನನ್ನ ಕೈಮೀರಿ ಬೌಲ್ ಮಾಡಲೇಬೇಕೆಂದು ಹೇಳಿಕೊಂಡೆ. ಮೊದಮೊದಲು ನೋವೇನೂ ಕಾಣಿಸಲಿಲ್ಲ. ಬೌಲಿಂಗ್ ಮಾಡಿದಾಗ ಮಾಮೂಲಾಗೇ ಇದ್ದೆ. ಆದರೆ ದಿನದ ಕೊನೆಗೆ ನೋವು ಗೋಳುಗುಟ್ಟಿಸತೊಡಗಿತ್ತು.
ಲಾರಾ ವಿಕೆಟ್ ಸಿಕ್ಕಿದ್ದು ಕೊಂಚ ಸಂತೋಷ. ದಿನದಾಟದ ಕೊನೆ ಅವಧಿಯಲ್ಲಿ ಕಾರ್ಲ್ ಹೂಪರ್ ವಿಕೆಟ್ ಪಡೆಯಲೇಬೇಕೆಂಬ ಹಟ ನನ್ನದಾಗಿತ್ತು. ಶಿವಸುಂದರ್ ದಾಸ್ ಕೈಗೆ ಕ್ಯಾಚೂ ಹೋಗಿತ್ತು. ಆದರೆ ನನ್ನ ದುರದೃಷ್ಟಕ್ಕೆ ಅದು ನೋ ಬಾಲ್. ನನ್ನಲ್ಲಿ ಧೈರ್ಯ ತುಂಬಿದ ಇಬ್ಬರು ಭಾರತೀಯ ವೈದ್ಯರಿಗೆ ಕೃತಜ್ಞತೆಗಳು. ಬಹುಶಃ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲೇಬೇಕು. ಆದರೆ ನಾನೀಗ ಬರಿಗೈಲಿ ವಾಪಸ್ಸಾಗುವುದಿಲ್ಲ. ಅದೇ ದೊಡ್ಡ ಸಮಾಧಾನ!
(ಎಎಫ್ಪಿ)
ಮುಖಪುಟ / ಇವತ್ತು... ಈ ಹೊತ್ತು...