ಕೆನಡಾದಲ್ಲಿ ನಡೆಯುವ ಜಾಗತಿಕ ಚಿಣ್ಣರ ಪರಿಸರ ಸಮಾವೇಶಕ್ಕೆ ಬೆಳಗಾವಿ ಹುಡುಗ
ಬೆಳಗಾವಿ : ನಗರದ ಸೇಂಟ್ ಪಾಲ್ ಹೈಸ್ಕೂಲಿನ 11 ವರ್ಷದ ವಿದ್ಯಾರ್ಥಿ ವಿವೇಕ್ ಡನವಳೆ ಕೆನಡಾಕ್ಕೆ ಹಾರಲಿದ್ದಾನೆ. ಮಜಾ ಉಡಾಯಿಯೋಕೆ ಅಲ್ಲ, ಪಶ್ಚಿಮ ಘಟ್ಟಗಳ ಕುರಿತು ಪ್ರಬಂಧ ಮಂಡಿಸೋಕೆ!
ಮೇ 21ರಿಂದ ಕೆನಡಾದಲ್ಲಿನ ವಿಕ್ಟೋರಿಯಾದಲ್ಲಿ ಅಂತರರಾಷ್ಟ್ರೀಯ ಮಕ್ಕಳ ಪರಿಸರ ಸಮಾವೇಶ. 115 ದೇಶಗಳ 800 ಮಕ್ಕಳನ್ನು ಈ ಸಮಾವೇಶಕ್ಕೆ ಆಯ್ಕೆ ಮಾಡಲಾಗಿದೆ. ಪುಟ್ಟ ಮಕ್ಕಳ ಪರಿಸರ ಕಳಕಳಿಗೆ ಇದೊಂದು ವೇದಿಕೆಯಷ್ಟೇ ಅಲ್ಲ, ಎಲ್ಲಾ ಮಕ್ಕಳೂ ಮಂಡಿಸುವ ಪ್ರಬಂಧಗಳು ಸಂಶೋಧನೆಯಿಂದ ಸಿದ್ಧಪಡಿಸಿರುವಂಥವು.
ಮಳೆ, ಹವಾಮಾನ ಬದಲಾವಣೆಗಳಲ್ಲಿ ಪಶ್ಚಿಮ ಘಟ್ಟಗಳ ಪಾತ್ರ ಹಾಗೂ ಕರ್ನಾಟಕದ ಮಹದಾಯಿ ಕಣಿವೆ ಬಗ್ಗೆ ವಿವೇಕ್ ಮಾತಾಡಲಿದ್ದಾನೆ. ಪ್ರಾಯ ವರ್ಣಿ ಎಂಬ ಸ್ವ-ಸಹಾಯ ಸಂಸ್ಥೆಯ ಚಿಣ್ಣ ಸದಸ್ಯನಾಗಿರುವ ವಿವೇಕ್ ಮಹದಾಯಿ ಕಣಿವೆ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾನೆ. ಈತನೊಟ್ಟಿಗೆ ಕೆನಡಾಗೆ ಹೋಗಲು ಪ್ರಾಯ ವರ್ಣಿ ಸಂಸ್ಥೆಯ ಕಾರ್ಯದರ್ಶಿ ನೈಲಾ ಕೊಯಿಲ್ಹೋ ಸಿದ್ಧರಿದ್ದಾರೆ. ಸಿಕ್ಕಿರುವ ಈ ಅಪರೂಪದ ಅವಕಾಶಕ್ಕೆ ಚಿಕ್ಕದೊಂದು ಅಡಚಣೆ. ಈ ಸಮಾವೇಶದ ಖರ್ಚನ್ನು ಕೆನಡಾ ಸರ್ಕಾರ ಭರಿಸುವುದಿಲ್ಲ. ಇಬ್ಬರು ಹೋಗಿ ಬರಲು ಸುಮಾರು ಎರಡೂವರೆ ಲಕ್ಷ ರುಪಾಯಿ ಬೇಕಾಗುತ್ತದೆ. ಹಣ ಸಹಾಯ ಮಾಡುವಂತೆ ವಿವೇಕ್ ಈಗಾಗಲೇ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಕೋರಿದ್ದಾನೆ. ಕೆಲವು ಹಣಕಾಸು ನೆರವು ಕೊಡುವ ಸಂಸ್ಥೆಗಳಿಗೂ ಎಡತಾಕಿದ್ದಾನೆ. ಇಂಡಿಯನ್ ಅಲ್ಯುಮಿನಿಯಂ ಕಂಪನಿ ಲಿಮಿಟೆಡ್ 70 ಸಾವಿರ ರುಪಾಯಿ ಕೊಟ್ಟಿದೆ. ಮಾಲಿನ್ಯ ನಿಯಂತ್ರಣ ಮಂಡಳಿ 30 ಸಾವಿರ ರುಪಾಯಿ ಕೊಡಲು ಒಪ್ಪಿದೆ. ಸೇಂಟ್ ಪಾಲ್ ಹೈಸ್ಕೂಲು 10 ಸಾವಿರ ರುಪಾಯಿ ಕೊಡಲು ಸಿದ್ಧವಿದೆ. ಹಣಕ್ಕಾಗಿ ವಿವೇಕ್ ಓಡಾಟ ಮುಂದುವರೆದಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...