ಗಂಗೂಲಿ, ಕಪಿಲ್, ಅಜರ್, ಜಡೇಜಾ ಸರ್ಕಾರಕ್ಕೆ ಪೂರ್ತಿ ತೆರಿಗೆ ಕಟ್ಟಿಲ್ಲ
ನವದೆಹಲಿ : ನಿಷೇಧಿತ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಕ್ರಿಕೆಟ್ ಬಿಟ್ಟು ಗಾಲ್ಫ್ ಆಡುತ್ತಾ ಕ್ರಿಕೆಟಿಗರ ತರಾಟೆಗೆ ತೆಗೆದುಕೊಳ್ಳುತ್ತಿರುವ ಕಪಿಲ್ ದೇವ್, ಸೋಲುಗಳ ನಡುವೆಯೂ ಗೆದ್ದೇ ಗೆಲ್ತೀವಿ ಅಂತ ನಗುವ ಸೌರವ್ ಗಂಗೂಲಿ ಸೇರಿದಂತೆ 33 ಕ್ರಿಕೆಟಿಗರಿಂದ ಸರ್ಕಾರದ ಬೊಕ್ಕಸಕ್ಕೆ 3.81 ಕೋಟಿ ರುಪಾಯಿ ಸುಂಕ ಬರಬೇಕಿದೆ!
ಮಂಗಳವಾರ ರಾಜ್ಯ ಸಭೆಯ ಕಲಾಪದಲ್ಲಿ ಪ್ರತಿಧ್ವನಿಸಿದ ವಿಷಯವಿದು. ತೆರಿಗೆ ಬಾಕಿ ಇಟ್ಟುಕೊಂಡಿರುವ ಆಟಗಾರರಿಂದ ಅದನ್ನು ವಸೂಲು ಮಾಡಲು ಕ್ಷಿಪ್ರ ಕ್ರಮ ಕೈಗೊಳ್ಳುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಮಾತು ಕೇಳಿಬಂತು. ಇದಕ್ಕೆ ಉತ್ತರಿಸಿದ ವಿತ್ತ ಸಚಿವ ಯಶವಂತ ಸಿನ್ಹಾ, ಕಾನೂನಿನ ಹಾದಿಯಲ್ಲೇ ತೆರಿಗೆ ವಸೂಲು ಮಾಡಬೇಕು. ಅಡ್ಡದಾರಿ ಹಿಡಿಯಲಾಗದು. ಈ ಕಾರಣದಿಂದಲೇ ತೆರಿಗೆ ಬಾಕಿ ವಸೂಲಿ ವಿಳಂಬವಾಗುತ್ತಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದರು.
ಇದಕ್ಕೂ ಮುನ್ನ ರಾಜ್ಯ ವಿತ್ತ ಖಾತೆಯ ಕೇಂದ್ರ ಸಚಿವ ಜಿ.ರಾಮಚಂದ್ರನ್ 33 ಆಟಗಾರರ ಪೈಕಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕೆಲವು ಕ್ರಿಕೆಟಿಗರ ಪಟ್ಟಿಯನ್ನೇ ಸದನದ ಮುಂದಿಟ್ಟರು. ಅದರಲ್ಲಿದ್ದ ಹೆಸರುಗಳು- ಕಪಿಲ್ ದೇವ್, ಅಜಯ್ ಜಡೇಜಾ, ನಿಖಿಲ್ ಛೋಪ್ರಾ, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಸುನಿಲ್ ಜೋಷಿ, ಡಬ್ಲ್ಯು.ವಿ.ರಾಮನ್ ಮತ್ತು ನಯನ್ ಮೊಂಗಿಯಾ.
ಸಚಿನ್ ತೆಂಡೂಲ್ಕರ್, ಎಸ್.ಎಸ್.ದಾಸ್, ವಿವಿಎಸ್ ಲಕ್ಷ್ಮಣ್, ವೆಂಕಟೇಶ ಪ್ರಸಾದ್, ಎಸ್.ಶ್ರೀರಾಮ್, ಕಿರಣ್ ಮೋರೆ, ಎಸ್.ವೆಂಕಟರಾಘವನ್ ಮತ್ತು ಸುನಿಲ್ ಗವಾಸ್ಕರ್ ಸರ್ಕಾರಕ್ಕೆ ಕೊಡಬೇಕಾದ ತೆರಿಯಲ್ಲಿ ಚಿಕ್ಕಾಸೂ ಉಳಿಸಿಕೊಂಡಿಲ್ಲ ಎಂದೂ ರಾಮಚಂದ್ರನ್ ಹೇಳಿದರು.
ನಾವು ಆಟಗಾರರ ತೆರಿಗೆ ವಿವರಗಳನ್ನೇ ಬೇರೆಯಾಗಿ ಇಡುತ್ತಿಲ್ಲ. ಯಾರ್ಯಾರಿಂದ ಸರ್ಕಾರಕ್ಕೆ ತೆರಿಗೆ ಬಾಕಿ ಬರಬೇಕೋ ಎಲ್ಲರ ವಿರುದ್ಧವೂ ಶಿಸ್ತಿನ ಕ್ರಮ ಜರುಗಿಸುತ್ತಲೇ ಇದ್ದೇವೆ. ಕೆಲವು ಕ್ರಿಕೆಟಿಗರ ಮನೆಗಳಿಗೆ, ಅವರ ಬಂಧುಗಳ ಮನೆಗಳಿಗೆ ತೆರಿಗೆ ಇಲಾಖೆ ದಾಳಿ ನಡೆಸಿ, ಮಹತ್ತರ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಶತಾಯಗತಾಯ ಬಾಕಿ ಇರುವ ತೆರಿಗೆಯನ್ನು ಇಲಾಖೆ ವಸೂಲಿ ಮಾಡಿಯೇ ತೀರುತ್ತದೆ ಎಂದು ಯಶವಂತ ಸಿನ್ಹಾ ಭರವಸೆ ಕೊಟ್ಟರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...