ಜನಪ್ರತಿನಿಧಿ ಅಕ್ಷರಸ್ಥನಾಗಿರುವುದು ಕಡ್ಡಾಯವಾಗಬೇಕು-ಬಿ.ಎಲ್.ಶಂಕರ್
ಬೆಂಗಳೂರು: ಸಾಕ್ಷರರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಿ. ಎಲ್. ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಪಂಚಾಯತ್ ಮಟ್ಟದಿಂದ ಎಲ್ಲ ಹಂತಗಳಲ್ಲೂ ಜನಪ್ರತಿನಿಧಿಗಳಾಗಲು ಅಕ್ಷರಸ್ಥರು ಮಾತ್ರ ಸ್ಪರ್ಧಿಸುವುದನ್ನು ಕಡ್ಡಾಯ ಮಾಡಬೇಕು ಎಂದು ಶಂಕರ್ ಸರಕಾರವನ್ನು ಆಗ್ರಹಿಸಿದರು. ಅವರು ಭಾನುವಾರ ನಗರದಲ್ಲಿ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ದಿವಂಗತ ಕೆ. ಚಂಗಲರಾಯರೆಡ್ಡಿಯವರ 100ನೇ ಜನ್ಮಶತಾಬ್ಧಿ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ರಾಜಕೀಯ ಕ್ಷೇತ್ರದಲ್ಲಿ ಹಿಂಸೆ, ಅಸೂಯೆಗಳೇ ತುಂಬಿರುವುದರಿಂದ ಯುವಕರು ರಾಜಕೀಯ ಪ್ರವೇಶಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿಯನ್ನು ಶುದ್ಧಗೊಳಿಸಿ ಹೊಸ ಮುಖಗಳು ರಾಜಕೀಯ ಪ್ರವೇಶಿಸುವಂತೆ ಮಾಡುವ ಜವಾಬ್ದಾರಿ ಇಂದಿನ ರಾಜಕಾರಣಿಗಳ ಮೇಲಿದೆ. ಅಲ್ಲದೆ ಓದು ಬರಹ ತಿಳಿದವರನ್ನೇ ಅಭ್ಯರ್ಥಿಗಳನ್ನಾಗಿಸಲು ಎಲ್ಲ ರಾಜಕೀಯ ಪಕ್ಷಗಳೂ ಒಗ್ಗೂಡಿ ಗಮನ ಹರಿಸಬೇಕು ಎಂದು ಶಂಕರ್ ಹೇಳಿದರು.
ಮಹಿಳೆಯರು ಮತ್ತು ಹಿಂದುಳಿದವರಿಗೆ ರಾಜಕೀಯದಲ್ಲಿ ಅವಕಾಶ ನೀಡುವುದು ಮಾತ್ರವಲ್ಲದೆ, ಶಾಸನ ಸಭೆ ಮತ್ತು ಸಂಸತ್ತಿನಲ್ಲಿ ಚರ್ಚೆ ಮತ್ತು ನಡವಳಿಕೆಯ ವಿಷಯವಾಗಿಯೂ ಅವರಿಗೆ ತರಬೇತಿ ನೀಡಬೇಕು. ಇದಕ್ಕಾಗಿ ಸಂವಿಧಾನ ಕ್ಲಬ್ಗಳನ್ನು ಸ್ಥಾಪಿಸಬೇಕು ಎಂದು ಶಂಕರ್ ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...