ಭೈರೇಗೌಡರ ಮಗಳ ಮದುವೆ ಸರಳ, ಲಗ್ನಪತ್ರಿಕೆಯನ್ನೇ ಮಾಡಿಸಿರಲಿಲ್ಲ !
ಬೆಂಗಳೂರು : ರಾಜರಾಜೇಶ್ವರಿ ನಗರದ ಜಾನಾಕ್ಷಿ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಒಂದು ಮದುವೆ. ವಧು- ಮಂಗಳಾ. ವರ- ಸಾಫ್ಟ್ವೇರ್ ಎಂಜಿನಿಯರ್ ಕೇಶವ. ಒಂದು ಹಿಡಿ ಪತ್ರಕರ್ತರಿಗೆ ಈ ಮದುವೆಗೆ ದೂರವಾಣಿ ಮೂಲಕ ಬುಲಾವು ಬಂದಿತ್ತು. ಹೋದವರಿಗೆಲ್ಲಾ ಅಚ್ಚರಿ!
ಅದು ಸಂಯುಕ್ತ ಜನತಾ ದಳ ರಾಜ್ಯಾಧ್ಯಕ್ಷ ಸಿ.ಭೈರೇಗೌಡರ ಮಗಳ ಮದುವೆ. ಚಿಂತಾಮಣಿ ಶಾಸಕ ಚೌಡರೆಡ್ಡಿ ಹಾಗೂ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಬಿಟ್ಟರೆ ಬೇರಾವ ರಾಜಕೀಯ ಆಕೃತಿಗಳೂ ಅಲ್ಲಿರಲಿಲ್ಲ. ರಾಜಕಾರಣಿಯಾಬ್ಬರ ಮಗಳ ಮದುವೆ ಇಷ್ಟೊಂದು ಸಪ್ಪೆಯಾಗಿರುತ್ತದಾ? ಅದೇ ಭೈರೇಗೌಡರ ವೈಶಿಷ್ಟ್ಯ.
ಮುಹೂರ್ತ ಮುಗಿದ ನಂತರ ಪತ್ರಕರ್ತರಿಗೆ ಅವರು ದೊಡ್ಡ ಉಪನ್ಯಾಸವನ್ನೇ ಕೊಟ್ಟರು. ಸರಳ ಮದುವೆಗೆ ಇದುವೆ ನಾಂದಿ ಅಂದರು. ಅವರ ಉಪನ್ಯಾಸವನ್ನು ಅವರ ಮಾತುಗಳಲ್ಲೇ ಕೇಳಿ...
ನಾನು ಈ ಮದುವೆಗೆ ಲಗ್ನಪತ್ರಿಕೆಯನ್ನೇ ಮುದ್ರಿಸಿರಲಿಲ್ಲ. ರಕ್ತ ಸಂಬಂಧಿಗಳಿಗೆ ಮಾತ್ರ ನನ್ನ ಕರೆಯೋಲೆ. ಆಡಂಬರದ ಮದುವೆ ತೋರಿಕೆಗಾಗಿ ಮಾತ್ರ ನಡೆಯುತ್ತಿದೆ. ಹಿಂದೆ ರಕ್ಷಣೆಯ ಸಲುವಾಗಿ ಮದುವೆ ಸಮಾರಂಭಕ್ಕೆ ಜನರ ಸೇರಿಸುತ್ತಿದ್ದರು. ಈಗ ಅದೊಂದು ಡಂಭಾಚಾರವಾಗಿ ಹೋಗಿದೆ. ಸಾಲ ಸೋಲ ಮಾಡಿಯಾದರೂ ಸರಿ, ಮದುವೆಯನ್ನು ಧಾಂಧೂಂ ಅಂತ ಮಾಡಬೇಕು ಎಂಬಂಥಾ ಪರಿಸ್ಥಿತಿ. ಲಗ್ನಪತ್ರಿಕೆಗಳಿಗೇ ಈಗ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಾರೆ. ನನ್ನ ದೃಷ್ಟಿಯಲ್ಲಿ ಆಡಂಬರದ ಮದುವೆ ಮಾಡುವುದು ಅಪರಾಧ! ಹಾಗೆ ನೋಡಿದರೆ, ತರಾತುರಿಯಲ್ಲಿ ನನ್ನ ಮಗಳ ಮದುವೆ ಮಾಡುತ್ತಿರುವುದರಿಂದ ಛತ್ರಕ್ಕೆ ದುಬಾರಿ ಹಣ ತೆರಬೇಕಾಯಿತು. ಈ ಸರಳ ಮದುವೆಗೇ 1 ಲಕ್ಷ ರುಪಾಯಿ ಖರ್ಚಾಗಿದೆ. ಮುಂದೆ ನನ್ನ ಮಗನ ಮದುವೆಯನ್ನು ಇನ್ನೂ ಸರಳವಾಗಿ ಮಾಡುವೆ.
ಅಂದಹಾಗೆ, ಚೌಡರೆಡ್ಡಿ ಹಾಗೂ ಶಿವರಾಮೇಗೌಡ ಮದುವೆಗೆ ಹಾಜರಾಗಲು ಕಾರಣ- ಇವರಿಬ್ಬರೂ ಭೈರೇಗೌಡರ ಸಂಬಂಧಿಗಳು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...