ಕೊನೆಗೂ ದಡ ಸೇರಿದ ಮಹದಾಯಿ, ಸದ್ಯದಲ್ಲೇ ಕಾಮಗಾರಿ ಆರಂಭ
ಬೆಂಗಳೂರು : ಕಳೆದೆರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹದಾಯಿ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಜಲ ಆಯೋಗ ರಾಜ್ಯಕ್ಕೆ ಒಪ್ಪಿಗೆ ನೀಡಿದೆ.
ಈ ಯೋಜನೆ ಪೂರ್ಣಗೊಳ್ಳುವುದರೊಂದಿಗೆ ಬೆಳಗಾವಿ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯ ನೂರಕ್ಕೂ ಹೆಚ್ಚು ಹಳ್ಳಿಗಳ ಕುಡಿಯು ನೀರಿನ ಸಮಸ್ಯೆ ಖಾಯಂ ಆಗಿ ಬಗೆಹರಿಯಲಿದೆ. ಮಹದಾಯಿಯಿಂದ ಮಲಪ್ರಭಾ ನದಿ ಮೂಲಕ್ಕೆ 7.56 ಟಿಎಂಸಿ ನೀರು ಹರಿಸುವ ಉದ್ದೇಶದ ಈ ಯೋಜನೆ ಒಂದುವರೆ ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿರುವುದರಿಂದ ಸದ್ಯದಲ್ಲೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಚ್. ಕೆ. ಪಾಟೀಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹದಾಯಿ ನದಿಯಿಂದ 7.56 ಟಿಎಂಸಿ ನೀರನ್ನು ಎರಡು ತಿರುವು ಯೋಜನೆಗಳ ಮೂಲಕ ಪಡೆಯಲಾಗುವುದು. ಕಳಸಾ ತಿರುವು ಯೋಜನೆಯಡಿಯಲ್ಲಿ 3.56 ಟಿಎಂಸಿ ನೀರು ಹಾಗೂ ಬಂಡೋರಾ ನಾಲಾ ತಿರುವು ಯೋಜನೆಯ ಮೂಲಕ 4 ಟಿಎಂಸಿ ನೀರನ್ನು ಪಡೆಯುವ ಯೋಜನೆಯ ಒಟ್ಟು ಅಂದಾಜು 93.98 ಕೋಟಿ ರೂಪಾಯಿಗಳು ಎಂದು ಪಾಟೀಲ್ ಹೇಳಿದರು. ಈ ಎರಡೂ ಯೋಜನೆಯ ಕಾಮಗಾರಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...