‘ಬಾಲಕಾರ್ಮಿಕ ಪದ್ಧತಿ ನಿಷೇಧಿಸಿದರೆ ಲಕ್ಷಾಂತರ ಕುಟುಂಬ ಬೀದಿಪಾಲು’
ಬೆಂಗಳೂರು: ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಕಿತ್ತು ಹಾಕಿದರೆ ಲಕ್ಷಾಂತರ ಬಡ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ. ಡಿ. ನಂಜುಂಡ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಮಂಗಳವಾರ ಕರ್ನಾಟಕ ಟ್ರೇಡ್ ಯೂನಿಯನ್ ಮತ್ತು ‘ಪರಸ್ಪರ’ಟ್ರಸ್ಟ್ ಜಂಟಿಯಾಗಿ ವಿಶ್ವ ಕಾರ್ಮಿಕ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬಾಲ ಕಾರ್ಮಿಕರನ್ನೇ ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವಿಸುತ್ತಿವೆ. ಆದ್ದರಿಂದ ಬಾಲಕಾರ್ಮಿಕ ಪದ್ಥತಿಯನ್ನು ರದ್ಧಪಡಿಸುವುದು ಕಷ್ಟವಿದೆ. ಇದರರ್ಥ ಈ ಪದ್ಧತಿಯನ್ನು ರದ್ದುಪಡಿಬಾರದು ಎಂದೇನೂ ಅಲ್ಲ. ರದ್ಧತಿಗೆ ಮುಂಚೆ ಮಕ್ಕಳ ಶಿಕ್ಷಣಕ್ಕೆ, ಮನೆಯವರ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪೂರಕ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅವರು ಸರಕಾರಕ್ಕೆ ಸಲಹೆ ಮಾಡಿದರು.
ಬಾಲ ಕಾರ್ಮಿಕ ಪದ್ಧತಿಯನ್ನು ರದ್ದುಪಡಿಸುವಂತೆ ಅನೇಕ ಮುಂದುವರೆದ ರಾಷ್ಟ್ರಗಳು ಭಾರತದಂತಹ ಮೂರನೆಯ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿವೆ. ಅವರು ಬಡ ಮಕ್ಕಳ ಮೇಲಿನ ಪ್ರೀತಿಯಿಂದ ಈ ಒತ್ತಡ ಹೇರುತ್ತಿಲ್ಲ. ಬದಲಾಗಿ ನಮ್ಮ ದೇಶದ ವಸ್ತುಗಳ ಆಮದನ್ನು ನಿರಾಕರಿಸಲು ಅವರು ಈ ನೆಪ ಹುಡುಕಿಕೊಂಡಿದ್ದಾರಷ್ಟೆ ಎಂದು ಹೇಳಿದ ನಂಜುಂಡಸ್ವಾಮಿ, ಖಾಸಗೀಕರಣ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಕಾರ್ಮಿಕರು ತೀವ್ರ ಹೋರಾಟ ಆರಂಭಿಸಬೇಕು ಎಂದು ಕರೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...