ಆದಿವಾಸಿಗಳ ಹಿತ ರಕ್ಷಣೆಗೆ ಮೇ1ರಂದು ನಿಯಮ ಉಲ್ಲಂಘನಾ ಚಳವಳಿ
ಚಿಕ್ಕಮಗಳೂರು: ಗಿರಿಜನರ ಬದುಕಿಗೆ ಮಾರಕವಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ವಿರೋಧಿಸಿ ಕಾರ್ಮಿಕರ ದಿನವಾದ ಮೇ 1ರಂದು ನಿಯಮ ಉಲ್ಲಂಘನಾ ಚಳವಳಿ ನಡೆಸಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಸಮಿತಿ ನಿರ್ಧರಿಸಿದೆ.
ಉದ್ಯಾನವನ ವಿರೋಧಿ ಮುಖಂಡರು ಶೃಂಗೇರಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದ ನಂತರ ಕುದುರೆಮುಖ ಉದ್ಯಾನವನಕ್ಕೆ ತೆರಳಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉದ್ಯಾನವನದ ಅಂತಿಮ ಘೋಷಣೆಯಾದ ನಂತರ ಆದಿವಾಸಿಗಳಿಗೆ ಉದ್ಯಾನವನದ ಅಧಿಕಾರಿಗಳು ತೀರಾ ಹಿಂಸೆ ಕೊಡುತ್ತಿದ್ದಾರೆ. ಇದನ್ನು ವಿರೋಧಿಸಿ ಸಮಿತಿ ಹೋರಾಟ ಕೈಗೆತ್ತಿಕೊಂಡಿದೆ ಎಂದು ಹೆಗ್ಡೆ ಹೇಳಿದರು.
ಕಾಡಿಗೆ ದನ ಬಿಡಲು, ಸೊಪ್ಪು ಸೌದೆ ಕಡಿಯಲು, ಅಗತ್ಯ ಜೀವನಕ್ಕೆ ಬೇಕಾದ ನೀರು ಬಳಕೆಗೆ ಉದ್ಯಾನದ ಅಧಿಕಾರಿಗಳು ಆದಿವಾಸಿಗಳಿಗೆ ಅವಕಾಶ ನೀಡುತ್ತಿಲ್ಲ. ಹೊರ ಜಗತ್ತಿನ ಪರಿಚಯವಿಲ್ಲದ ಆದಿವಾಸಿಗಳಿಗೆ ಈ ನಿರ್ಬಂಧಗಳಿಂದ ಬದುಕುವುದು ಕಷ್ಟವಾಗಿದೆ. ಈ ಎಲ್ಲ ಕ್ರಮಗಳನ್ನು ವಿರೋಧಿಸಿ ಮೇ 1ರಂದು ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಹೆಗ್ಡೆ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...