ಪದ್ಮವಿಭೂಷಣ ಯೇಸುದಾಸ್ಗೆ ಅಷ್ಟಮಠದ ಆಸ್ಥಾನ ವಿದ್ವಾಂಸ ಪಟ್ಟ
ಉಡುಪಿ: ಪದ್ಮವಿಭೂಷಣ ಪ್ರಶಸ್ತಿ ವಿಜೇತ ಯೇಸುದಾಸ್ ಅವರನ್ನು ಆಸ್ಥಾನ ವಿದ್ವಾಂಸರೆಂದು ಉಡುಪಿ ಅಷ್ಟಮಠದ ಸ್ವಾಮೀಜಿಗಳು ಘೋಷಿಸಿದ್ದಾರೆ.
ಗಾಯಕ ಯೇಸುದಾಸ್ ಅವರನ್ನು ಅಷ್ಟ ಮಠದ ವಿದ್ವಾಂಸರೆಂದು ಪರಿಗಣಿಸಿ ಸನ್ಮಾನಿಸಲಾಯಿತು. ಕಲಾವಿದರೊಬ್ಬರನ್ನು ಅಷ್ಟಮಠಗಳು ಒಟ್ಟಾಗಿ ಸೇರಿ ಸನ್ಮಾನಿಸುತ್ತಿರುವುದು ಇದೇ ಮೊದಲು. ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಯೇಸುದಾಸ್ ಅವರನ್ನು ಎಂಟು ಮಠಗಳ ಪರವಾಗಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಸನ್ಮಾನಿಸಿ, ಶಾಲು ಹೊದೆಸಿ ಗೌರವಿಸಿದರು. ಪರ್ಯಾಯ ಪೀಠದ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು ಯೇಸುದಾಸ್ ಅವರಿಗೆ ಚಿನ್ನದ ಅಭಿನಂದನಾ ಪತ್ರ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಣ್ದುಂಬಿ ಮಾತನಾಡಿದ ಯೇಸುದಾಸ್ ಸಂಗೀತದ ಬಗ್ಗೆ ಶ್ರದ್ಧೆ ಹಾಗೂ ಭಕ್ತಿ ಮೂಡಿಸಿದ ತಮ್ಮ ಗುರುಗಳನ್ನು ನೆನೆದರು. ಕಲಾವಿದನಾಗುವಂತೆ ನಿರಂತರವಾಗಿ ಪ್ರೇರೇಪಿಸಿದ ತಮ್ಮ ತಂದೆಯವರ ಕೃಪೆಯೇ ನನ್ನ ಈ ಸಾಧನೆಗೆ ಕಾರಣ. ಈ ಗೌರವಕ್ಕೆ ನಾನು ಚಿರ ಋಣಿ ಎಂದು ಯೇಸುದಾಸ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...