ಹಿಂಸೆಯ ದರಬಾರಿನಲ್ಲಿ ನನ್ನ ಹಾಡು ಕಳೆದುಹೋಗಿದೆ -ಗಾಯಕ ಲಕ್ಕಿಆಲಿ
ಎಲ್ಲಿ ನೋಡಿದರೂ ಬರೀ ಹಿಂಸೆ. ಗುಜರಾತಿನಲ್ಲಿ, ಅಥಣಿಯಲ್ಲಿ ... ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಬರೀ ಹಿಂಸೆಯದೇ ದರಬಾರು. ಮನೆಯಲ್ಲಿ ರಿಮೋಟ್ ಒತ್ತಿದ ತಕ್ಷಣವೇ ಟೀವಿಯಲ್ಲಿಯೂ ಬರೀ ಹಿಂಸೆಯ ಪ್ರತಿಧ್ವನಿಗಳು...ಇವೆಲ್ಲವನ್ನೂ ನೋಡಿದಾಗ ಮನಸ್ಸಿನೊಳಗೆ ಸಂಗೀತ ಎನ್ನುವುದು ಹೇಗೆ ಉದಿಸಬೇಕು ಹೇಳಿ ! ಪ್ರಖ್ಯಾತ ಪಾಪ್ ಗಾಯಕ ಲಕ್ಕಿ ಆಲಿ ಅವರ ಕೊರಗು ಇದೇ.
ಇವತ್ತಿನ ವಾತಾವರಣ ನೋಡಿದಾಗ ನನಗೆ ಹಾಡಬೇಕು ಅಂತ ಅನಿಸುವುದಿಲ್ಲ. ದೇಶದಲ್ಲಿನ ಬೆಳವಣಿಗೆಗಳನ್ನು ನೋಡಿದಾಗ ಅದರಲ್ಲಿಯೂ ಗುಜರಾತಿನ ಪರಿಸ್ಥಿತಿ ನೋಡಿದಾಗ ಯಾವ ಹಾಡನ್ನೂ ಗುನುಗಬೇಕು ಅಂತ ಅನಿಸುವುದಿಲ್ಲ ... ಎಂದು ಶನಿವಾರ ಬೆಂಗಳೂರಿಗೆ ಅಗಮಿಸಿದ್ದ ಲಕ್ಕಿ ಅಲಿ ಬೇಜಾರು ತೋಡಿಕೊಂಡರು.
ರಾಜಕಾರಣಿಗಳು ಸಮಾಜ ಮುಖಿಯಾಗದಿದ್ದರೆ...
ಪರಿಸ್ಥಿತಿ ಇಷ್ಟು ಹದಗೆಟ್ಟಿರುವಾಗ ಧಾರ್ಮಿಕ ನಾಯಕರು ಸ್ವಾರ್ಥವನ್ನು ಬಿಟ್ಟು ಮಾತುಕತೆಗೆ ಮುಂದಾಗಬೇಕು. ದೇಶದ ವೈವಿಧ್ಯತೆ ಮತ್ತು ಏಕತೆಯನ್ನು ಚೆಂದಾಗಿ ಕಾಪಾಡಿಕೊಂಡು ಬರಬೇಕಿದ್ದರೆ ಮಾತುಕತೆಗಳು ಅತ್ಯಗತ್ಯ ಎಂದ ಆಲಿ ಅವರು, ಗುಜಾರತ್ ಹಿಂಸಾಚಾರ ಒಂದು ನೆಪ ಮಾತ್ರ. ದೇಶದ ಎಲ್ಲ ಕಡೆಯೂ ಧರ್ಮ ಸಹಿಷ್ಣುತೆ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ರೀತಿಯ ಅಂತಃಕಲಹಗಳಿಂದ ದೇಶದ ಹೆಸರು ಹಾಳಾಗುವುದಲ್ಲದೆ, ಜನರ ನೆಮ್ಮದಿಯೂ ಕೆಡುತ್ತದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ರಾಜಕಾರಣಿಗಳ ವಿಶಾಲ ದೃಷ್ಟಿಕೋನವೊಂದೇ ಮದ್ದು. ತಮ್ಮ ಒಳಿತಿನ ಬಗ್ಗೆಯೇ ಯೋಚಿಸುವುದನ್ನು ಬಿಟ್ಟು, ರಾಜಕಾರಣಿಗಳು ಜನರ ಕಲ್ಯಾಣದತ್ತ ಗಮನ ಹರಿಸಬೇಕು ಎಂದು ಆಲಿ ಸಲಹೆ ಮಾಡಿದರು.
ದ್ವೇಷದಿಂದ ಯಾರಿಗೂ ಒಳಿತಾಗದು. ಎಲ್ಲ ಧರ್ಮದವರು ತಮ್ಮ ತಮ್ಮ ಪೂರ್ವಾಗ್ರಹವನ್ನು ಬಿಟ್ಟು, ಗಾಂಧಿ ತತ್ವವನ್ನು ಪಾಲಿಸಿದಲ್ಲಿ, ನಮ್ಮ ದೇಶ ಜಗತ್ತಿನಲ್ಲಿ ಆದರ್ಶ ರಾಷ್ಟ್ರ ಎನಿಸಿಕೊಳ್ಳದಿರುತ್ತದೆಯೇ ಎಂದು ಲಕ್ಕಿ ಆಲಿ ಪ್ರಶ್ನಿಸಿದರು. ಅವರು ನಗರದಲ್ಲಿ ಆಯೋಜಿಸಿದ್ದ ಹಮಾರಾ ಭಾರತ್ ಎಂಬ ರಾಷ್ಟ್ರೀಯ ಅಂತರ್ಧರ್ಮ ಸಹಿಷ್ಣುತಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
(ಇನ್ಫೋ ವಾರ್ತೆ)
ಲಕ್ಕಿ ಆಲಿ ವೇದನೆಗೆ ನಿಮ್ಮ ಸಂವೇದನೆ ಏನು ?
ಮುಖಪುಟ / ಇವತ್ತು... ಈ ಹೊತ್ತು...