ದೇವರಬೆಳಕೆರೆಯಲ್ಲಿ ಮಾಲಿನ್ಯ,ತೇಲುತ್ತಿರುವ ರಾಶಿ ರಾಶಿ ಮೀನಿನ ಹೆಣಗಳು
ಹರಿಹರ: ಇಲ್ಲಿನ ದೇವರ ಬೆಳಕೆರೆಯಲ್ಲಿ ರಾಸಾಯನಿಕ ಪದಾರ್ಥಗಳ ಪ್ರಭಾವದಿಂದ ಸಹಸ್ರಾರು ಮೀನುಗಳು ಸತ್ತು ಹೋಗಿವೆ.
ಜಲಾಶಯದ ಆವರಣದಲ್ಲಿ ಸತ್ತ ಮೀನುಗಳು ರಾಶಿ ರಾಶಿಯಾಗಿ ತೇಲುತ್ತಿವೆ. ಸುಮಾರು 2- 3 ಕಿಲೋ ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸತ್ತ ಮೀನುಗಳು ಕಾಣಸಿಗುತ್ತಿವೆ. ಹೊಲ- ಗದ್ದೆಗಳಲ್ಲಿ ಬೆಳೆಗೆ ಸಿಪಂಡಿಸಿದ ಕ್ರಿಮಿನಾಶಕ ಪಕ್ಕದಲ್ಲಿರುವ ಜಲಾಶಯವನ್ನು ಸೇರಿಕೊಂಡದ್ದರಿಂದ ಈ ಮೀನುಗಳ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಅಲ್ಲದೆ, ಕುಕ್ಕವಾಡ ಸಕ್ಕರೆ ಕಾರ್ಖಾನೆಯು ಅನುಪಯುಕ್ತ ರಾಸಾಯನಿಕ ನೀರು ಹರಿಯಬಿಟ್ಟಿರುವುದರಿಂದಲೂ ಈ ದುರಂತ ನಡೆದಿರಬಹುದು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಅಧಿಕ ಪ್ರಮಾಣದಲ್ಲಿ ಮೀನು ಮರಿಗಳೇ ಸಾವಿಗೀಡಾಗಿವೆ.
ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟವೂ ಗಣನೀಯವಾಗಿ ಕುಸಿದಿದೆ. ಜಲಾಶಯದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ವಿಷಯುಕ್ತ ರಾಸಾಯನಿಕ ಜಲಚರಗಳ ಬಲಿತೆಗೆದುಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಹಿಂದೆ ಇದೇ ಕೆರೆಗೆ ಬಸ್ಸು ಮಗುಚಿ ಬಿದ್ದ ಪರಿಣಾಮ 96 ಮಂದಿ ಸಾವನ್ನಪ್ಪಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...