ಪ್ಲಾಸ್ಟಿಕ್ ತಿಂದು ಬನ್ನೇರುಘಟ್ಟದ 18 ಸಾರಂಗ, ಜಿಂಕೆ ಸಾವು
ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ 18 ಸಾರಂಗ ಹಾಗೂ ಜಿಂಕೆಗಳು ಪ್ಲಾಸ್ಟಿಕ್ ತಿಂದು, ಇತ್ತೀಚೆಗೆ ಮೃತಪಟ್ಟಿವೆ. ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯಿಂದ ಆಗುತ್ತಿರುವ ದೊಡ್ಡ ಮೊತ್ತದ ಜೀವಹಾನಿಗೆ ಹಿಡಿದ ಕನ್ನಡಿ ಇದು.
ಸತ್ತ ಪ್ರಾಣಿಗಳ ಉದರದಲ್ಲಿ ಚೆಂಡಿನಾಕಾರದ ಪ್ಲಾಸ್ಟಿಕ್ ಮುದ್ದೆಗಳು ದೊರೆತಿವೆ. ಒಂದು ಅಧ್ಯಯನದ ಪ್ರಕಾರ ದನಗಳ ಹಾಗೂ ವನ್ಯ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿರಲು ಪ್ಲಾಸ್ಟಿಕ್ ಕೂಡ ಕಾರಣವಾಗಿದೆ. ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ ಹಾಗೂ ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನಿಯಂತ್ರಿಸುವುದೇ ಕಷ್ಟವಾಗಿದೆ. ಬಿಸುಟ ಕಂಡಾಪಟ್ಟೆ ಪ್ಲಾಸ್ಟಿಕ್ ವಸ್ತುಗಳನ್ನು ಪ್ರಾಣಿಗಳಿಗೆ ಎಟುಕದ ಜಾಗಕ್ಕೆ ವಿಲೇವಾರಿ ಮಾಡುವುದೂ ಸುಲಭವಲ್ಲ.
ದೇಶದ ಎಲ್ಲಾ ರಾಷ್ಟ್ರೀಯ ಉದ್ಯಾನಗಳು, ವನ್ಯಧಾಮಗಳು ಹಾಗೂ ಮೃಗಾಲಯಗಳಲ್ಲಿ ಪ್ಲಾಸ್ಟಿಕ್ ರಹಿತ ಪ್ರದೇಶಗಳನ್ನು ಕಾಪಿಡುವುದೇ ದೊಡ್ಡ ತಲೆನೋವಾಗಿದೆ. 20 ಮೈಕ್ರಾನ್ಗಿಂತ ಹೆಚ್ಚು ದಪ್ಪನಾದ ಪ್ಲಾಸ್ಟಿಕ್ ಬಳಕೆಯನ್ನು ಅನೇಕ ನಗರಗಳಲ್ಲಿ ನಿಷೇಧಿಸಲಾಗಿದೆ. ಆದರೆ ಬೆಂಗಳೂರಲ್ಲಿ ಇವತ್ತಿಗೂ ಪ್ಲಾಸ್ಟಿಕ್ ಬಳಕೆ ಅತಿಯಾಗೇ ಇದೆ. ಅದರಲ್ಲೂ ಬನ್ನೇರುಘಟ್ಟ ಒಂದು ಪಿಕ್ನಿಕ್ ಸ್ಪಾಟ್. ತಂಪು ಪಾನೀಯ, ಐಸ್ ಕ್ರೀಂ, ಚಿಪ್ಸ್, ಪಾಪ್ಕಾರ್ನ್ ಹೀಗೆ ಜನ ಮೆಲ್ಲುವ ಅನೇಕ ಪದಾರ್ಥಗಳು ಪ್ಲಾಸ್ಟಿಕ್ ಕವರುಗಳಲ್ಲೇ ತುಂಬಿರುವಂಥವು. ತಿಂದ ನಂತರ ಪ್ಲಾಸ್ಟಿಕ್, ಉದ್ಯಾನದ ಬಯಲಲ್ಲೇ ಬೀಳುತ್ತವೆ. ಹಾರಿಕೊಂಡು ಪ್ರಾಣಿಗಳಿಗೆ ಆಹಾರವಾಗುತ್ತವೆ. ನಾಗರಿಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಹಕರಿಸದಿದ್ದರೆ ಇನ್ನಷ್ಟು ಪ್ರಾಣಿಗಳು ಪ್ಲಾಸ್ಟಿಕ್ಗೆ ಬಲಿಯಾಗುವ ಭಯವಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...