ಬೆಂಗಳೂರಿನಲ್ಲಿ ವೃದ್ಧಾಶ್ರಮ ಸ್ಥಾಪಿಸಲು ರಾಮಚಂದ್ರಾಪುರ ಮಠದ ನಿರ್ಧಾರ
ಶಿವಮೊಗ್ಗ : ರಾಮಚಂದ್ರಾಪುರ ಮಠದ ವತಿಯಿಂದ ಬೆಂಗಳೂರಿನಲ್ಲಿ ವೃದ್ಧಾಶ್ರಮ ಹಾಗೂ ತೀರ್ಥ ಹಳ್ಳಿಯಲ್ಲಿ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು ಎಂದು ಮಠದ ಶ್ರೀಗಳಾದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ವೃದ್ಧರಿಗೆ ಅಗತ್ಯ ಇರುವ ವೈದ್ಯಕೀಯ ಸೇವೆ ಬೆಂಗಳೂರಿನಲ್ಲಿ ಯಥೇಷ್ಟವಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ವೃದ್ಧಾಶ್ರಮವೊಂದನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು. ತೀರ್ಥಹಳ್ಳಿಯಲ್ಲಿರುವ ಮಠದ ಶಾಖಾ ಕೇಂದ್ರದಲ್ಲಿ ಅಪರೂಪದ ಕೃತಿಗಳನ್ನೊಳಗೊಂಡ ಬೃಹತ್ ಲೈಬ್ರರಿಯನ್ನು ತೆರೆಯಲಾಗುವುದು ಎಂದು ಸ್ವಾಮೀಜಿ ಸೋಮವಾರ ಹೇಳಿದ್ದಾರೆ.
ಕೇರಳದ ಪಂಡಿತ್ ಎಂಬವರು ತಮ್ಮ ಸಂಗ್ರಹವಾದ ಸುಮಾರು 2 ಲಕ್ಷ ಪುಸ್ತಕ, 10 ಸಾವಿರ ಗ್ರಾಮಫೋನ್ ರೆಕಾರ್ಡ್ಗಳನ್ನು ಕೊಡುಗೆಯಾಗಿ ಮಠಕ್ಕೆ ನೀಡಿದ್ದಾರೆ. ಶಿವಾಜಿ ಮಹಾರಾಜನ ಪತ್ರ, ಹಳೇ ಪತ್ರಿಕೆಗಳು, ಹಾಗೂ ಇತರ ಶ್ರೇಷ್ಟ ಪುಸ್ತಕಗಳು ಈ ಸಂಗ್ರಹದಲ್ಲಿವೆ.
ಈ ಎರಡು ಯೋಜನೆಗಳಲ್ಲದೆ, ರಾಮಚಂದ್ರಾಪುರ ಮಠದ ಆವರಣದಲ್ಲಿ ಸುಮಾರು 60 ಎಕರೆ ಪ್ರದೇಶದಲ್ಲಿ ಪ್ರಾಚೀನ ತಕ್ಷಶಿಲಾ ಗುರುಕುಲ ಮಾದರಿಯ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಗುರುಕುಲಕ್ಕೆ ಈಗಾಗಲೇ ಶಿಲಾನ್ಯಾಸ ಕಾರ್ಯ ನಡೆದಿದೆ. ವೇದ , ಆಗಮ, ವಾಸ್ತುಶಾಸ್ತ್ರಗಳನ್ನು ಈ ವಿವಿಯಲ್ಲಿ ಕಲಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...