ಕೆಜಿಎಫ್ ಹೋರಾಟಕ್ಕೆ ಮೇಧಾಪಾಟ್ಕರ್ ಬೆಂಬಲ, ಬದಲಿ ವ್ಯವಸ್ಥೆಗೆ ಆಗ್ರಹ
ಬೆಂಗಳೂರು: ಕೆಜಿಎಫ್ನಲ್ಲಿ ಚಿನ್ನದ ನಿಕ್ಷೇಪ ಲಭ್ಯತೆ ಸಾಧ್ಯತೆಯನ್ನು ತಿಳಿದುಕೊಳ್ಳಲು ಸ್ವತಂತ್ರ ಸಂಸ್ಥೆಯಿಂದ ಸಮೀಕ್ಷೆ ನಡೆಸುವಂತೆ ನರ್ಮದಾ ಬಚಾವ್ ಆಂದೋಳನದ ನಾಯಕಿ ಮೇಧಾ ಪಾಟ್ಕರ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಚಿನ್ನದ ಗಣಿ ಉಳಿಸಲು ಕೆಜಿಎಫ್ ಪ್ರಜಾ ಚಳವಳಿ(ಕೆಪಿಎಂ) ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಮೇಧಾ ಪಾಟ್ಕರ್, ಕೆಪಿಎಂ ಮುಖಂಡರ ಜೊತೆಗೆ ಶುಕ್ರವಾರ ಚರ್ಚೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಷ್ಟದ ಹೆಸರಿನಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇಂಥ ನೀತಿಯನ್ನೇ ಕೆಜಿಎಫ್ಗೂ ಅನ್ವಯಿಸಲಾಗಿದೆ. ಆದರೆ ಗಣಿಯಲ್ಲಿ ಚಿನ್ನದ ನಿಕ್ಷೇಪ ಸಿಗುವ ಸಾಧ್ಯತೆಯ ಬಗ್ಗೆ ಈವರೆಗೂ ಪ್ರಾಮಾಣಿಕ ಸಮೀಕ್ಷೆ ನಡೆದಿಲ್ಲ ಎಂದರು.
ಗಣಿಗಾರಿಕೆ ಸಾಧ್ಯವಿಲ್ಲವೆಂದಾದರೆ, ಕೆಜಿಎಪ್ ಪಟ್ಟಣದ ನಿರ್ಗತಿಕ ಕುಟುಂಬಗಳಿಗೆ ಭದ್ರತೆ ಒದಗಿಸಲು ಆ ಪ್ರದೇಶದಲ್ಲಿ ರಾಜ್ಯ ಸರಕಾರ ಪರ್ಯಾಯ ಉದ್ಯಮಗಳನ್ನು ಸ್ಥಾಪಿಸಬೇಕು ಎಂದು ಸಲಹೆ ಮಾಡಿದ ಅವರು, ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳೂ ಸರಿಯಾಗಿಲ್ಲ ಎಂದು ದೂರಿದರು.
ಮುಂದಿನ ಭೇಟಿಯಲ್ಲಿ ರಾಜ್ಯದ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನನ್ನು ಕಾನೂನು ಉಲ್ಲಂಘಿಸಿ ಪ್ರವೇಶಿಸುವುದೇ ನನ್ನ ಗುರಿ. ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಥಳೀಯ ಆದಿವಾಸಿಗಳಿಗೆ ಉಚಿತ ಪ್ರವೇಶ ನಿರಾಕರಿಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಆದಿವಾಸಿಗಳ ಹಿತರಕ್ಷಣೆಗಾಗಿ ಜನಪರ ಸಂಘಟನೆಗಳೊಂದಿಗೆ ಹೋರಾಟದ ರೂಪು ರೇಶೆ ಸಿದ್ಧಪಡಿಸಲಾಗುವುದು ಎಂದು ಮೇಧಾ ಹೇಳಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಕೆಪಿಎಂನ ಸಂಚಾಲಕ ರಾಜಕುಮಾರ್, ಏಪ್ರಿಲ್ 23 ಮತ್ತು 24ರಂದು ಕೆಜಿಎಫ್ ಉಳಿಸಿ ಎಂಬ ಘೋಷಣೆಯಾಂದಿಗೆ ಕಾರ್ಮಿಕರ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...