ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬರಪೀಡಿತ ರೈತರಿಗೆ ಅರ್ಧ ಬೆಲೆಗೆ ಬಿತ್ತನೆ ಬೀಜ : ಎಸ್ಸೆಂ ಕೃಷ್ಣ ಘೋಷಣೆ
ಶಿವಮೊಗ್ಗ : ರಾಜ್ಯದ ಬರಪೀಡಿತ ಜಿಲ್ಲೆಗಳ ರೈತರಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಘೋಷಿಸಿದ್ದಾರೆ.
ಸಾಗರದಲ್ಲಿ ಶುಕ್ರವಾರ ನಡೆದ ಕಾಗೋಡು ಚಳವಳಿಯ ಸ್ವರ್ಣೋತ್ಸವ ಉದ್ಘಾಟಿಸಿ ಮಾತನಾಡಿದ ಎಸ್.ಎಂ.ಕೃಷ್ಣ ಮಧ್ಯಮ ಮತ್ತು ಸಣ್ಣ ರೈತರಿಗೆ ನೆರವಾಗಲು ಈ ಯೋಜನೆಯನ್ನು ರೂಪಿಸಲಾಗುವುದು ಎಂದರು. ಸಾಗರದ ರೈಲ್ವೇ ನಿಲ್ದಾಣಕ್ಕೆ ರಾಮ ಮನೋಹರ ಲೋಹಿಯಾ ಅವರ ಹೆಸರಿಡುವುದಕ್ಕೆ ಸರಕಾರದ ಸಮ್ಮತಿ ಇದೆ. ಆದರೆ ಈ ಬಗೆಗಿನ ಅಂತಿಮ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಳ್ಳಬೇಕು ಎಂದ ಕೃಷ್ಣ , ಅಂತರ್ಜಲ ಮಟ್ಟವನ್ನು ಮೇಲೆತ್ತಲು ಜನ ಸಾಮಾನ್ಯರು , ಸ್ವಸಹಾಯ ಗುಂಪುಗಳು ಹಾಗೂ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದರು.
ಸ್ವರ್ಣ ಮಹೋತ್ಸವದ ಹೈಲೈಟ್ಸ್ :
- ಕಾಗೋಡು ಚಳವಳಿ ತಮ್ಮಲ್ಲಿ ಬರಹದ ಪ್ರಜ್ಞೆ ಮೂಡಿಸಿದೆ. ನಾನು ಇಂದು ಇಷ್ಟು ದೊಡ್ಡ ಲೇಖಕನಾಗಲು ಈ ಕಾಗೋಡು ಚಳವಳಿಯೇ ಸ್ಫೂರ್ತಿ -ಕಾಗೋಡು ಸುವರ್ಣ ಸಂಚಿಕೆ ಬಗ್ಗೆ ಮಾತನಾಡಿದ ಸಾಹಿತಿ ಡಾ. ಯು.ಆರ್. ಅನಂತ ಮೂರ್ತಿ
- ಕಾಗೋಡು ಹೋರಾಟದ ರೂವಾರಿ ಎಚ್. ಗಣಪತಿಯಪ್ಪನವರಿಗೆ ದೇವರಾಜು ಅರಸ್ ಹೆಸರಿನ ಪ್ರಶಸ್ತಿ ನೀಡಬೇಕು -ಸಚಿವ ಕೆ. ಎಚ್. ಶ್ರೀನಿವಾಸ್
- ಆರು ಲಕ್ಷ ಗೇಣಿದಾರರಿಗೆ ಹಕ್ಕು ಪತ್ರ ನೀಡುವ ಮೂಲಕ ರಾಜ್ಯ ಒಂದು ದಾಖಲೆಯನ್ನೇ ನಿರ್ಮಿಸಿದೆ -ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ
- ಅದ್ಧೂರಿ ಸಮಾರಂಭಕ್ಕೆ ರಾಜ್ಯ ವಿವಿಧೆಡೆಗಳಿಂದ ರೈತರು, ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ವೇದಿಕೆಯಲ್ಲಿ ಡಾ. ಯು.ಆರ್. ಅನಂತ ಮೂರ್ತಿ ಮತ್ತು ಕೆ.ಎಚ್. ಶ್ರೀನಿವಾಸ್ ಹೊರತಾಗಿ ಕೇವಲ ಕಾಂಗ್ರೆಸ್ ಮುಖಂಡರೇ ಇದ್ದುದರಿಂದ ಇದು ಕಾಂಗ್ರೆಸ್ ಸಮಾರಂಭದಂತೆ ಭಾಸವಾಗುತ್ತಿತ್ತು.
- ಕಾಗೋಡು ಚಳವಳಿಯಲ್ಲಿ ಭಾಗವಹಿಸಿದ್ದ 58 ಮಂದಿ ಸತ್ಯಾಗ್ರಹಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
- ನೆರೆದಿದ್ದ ಸಾರ್ವಜನಿಕರಿಗೆಂದು ಭಾರೀ ಪ್ರಮಾಣದಲ್ಲಿ ಮೊಸರನ್ನ ಮತ್ತು ಪುಳಿಯೋಗರೆ ಪ್ಯಾಕೆಟ್ಗಳನ್ನು ತರಿಸಲಾಗಿತ್ತು. ಆದರೆ ಅದು ಕಳಪೆ ಗುಣಮಟ್ಟದ್ದಾಗಿದ್ದರಿಂದ ಹೆಚ್ಚಿನವರು ಪ್ಯಾಕೆಟ್ಟುಗಳನ್ನು ಬಿಸಾಕಿದ್ದರು. ಲಾರಿಗಟ್ಟಲೆ ಆಹಾರ ಕಸದ ರಾಶಿ ಸೇರಿತ್ತು.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Saturday, April 20, 2002, 5:30 [IST]