ಆದರ್ಶ ಸಮಾಜವೇ ಇರಲಿ, ವ್ಯಂಗ್ಯಚಿತ್ರಕಾರನ ಕೆಲಸ ಟೀಕೆ - ಆರ್ಕೆ
ಒಂದು ಆದರ್ಶ ಸಮಾಜವನ್ನು ಕಲ್ಪಿಸಿಕೊಳ್ಳಿ. ನೀಟಾಗಿರುವ ರಸ್ತೆಗಳು, ಅಗತ್ಯಕ್ಕೆ ತಕ್ಕಷ್ಟು ನೀರು, ವಸತಿ ಊಟಕ್ಕೆ ತೊಂದರೆ ಬಾರದ ಸಮಾಜದ ಕಲ್ಪನೆ ನಿಮ್ಮ ಕಣ್ಮುಂದೆ ಬಂದಿದೆಯಾ.... ದಿನ ನಿತ್ಯ ಪತ್ರಿಕೆಗಳಲ್ಲಿ ಕೊಲೆ ಸುಲಿಗೆಗಳ ಸುದ್ದಿಯಿಲ್ಲ... ಉಮೇಶ್ ರೆಡ್ಡಿ, ವೀರಪ್ಪನ್, ದಂಡುಪಾಳ್ಯ ಗ್ಯಾಂಗ್ನ ಬೆದರಿಕೆಗಳಿಲ್ಲ... ಪತ್ರಿಕೆಯ ಮುಖ ಪುಟದ ಕೆಳತುದಿಯಲ್ಲಿ ಯಾರ ಬಗ್ಗೆ ವ್ಯಂಗ್ಯ ಚಿತ್ರ ಬರಬಹುದು ? ವ್ಯಂಗ್ಯ ಚಿತ್ರಕಾರನೊಬ್ಬನಿಗೆ ಸವಾಲುಗಳಿರುವುದೇ ಇಲ್ಲಿ ಎಂದು ಪ್ರಸಿದ್ಧ ವ್ಯಂಗ್ಯಚಿತ್ರಕಾರ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಆರ್. ಕೆ. ಲಕ್ಷ್ಮಣ್ ಹೇಳುತ್ತಾರೆ.
ಆದರ್ಶ ಸಮಾಜವೇ ಇರಲಿ. ವ್ಯಂಗ್ಯ ಚಿತ್ರಕಾರನ ಕೆಲಸ ಟೀಕಿಸುವುದಷ್ಟೆ. ಟೀಕೆ ಇಲ್ಲದ ಚಿತ್ರ ಬಿಡಿಸುವಾತನನ್ನು ವ್ಯಂಗ್ಯ ಚಿತ್ರಕಾರ ಎಂದು ಕರೆಯುವುದು ಹೇಗೆ ಸಾಧ್ಯ ಹೇಳಿ ಎಂದು ಆರ್.ಕೆ. ಲಕ್ಷ್ಮಣ್ ಪ್ರಶ್ನಿಸುತ್ತಾರೆ. ಸಾಮಾನ್ಯ ಮನುಷ್ಯ ನಿರ್ಮಾತೃ ಎನಿಸಿಕೊಂಡಿರುವ ಆರ್ಕೆಯವರು ನಗರದಲ್ಲಿ ರೋಸರಿ ಮಾಧ್ಯಮ ಮತ್ತು ಸಮೂಹ ಸಂವಹನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಕಾರ್ಟೂನು ಬರೆಯುವುದು ತುಂಬ ಕಷ್ಟದ ಕೆಲಸ. ಅದರ ಹಿಂದಿರುವ ಉದ್ದೇಶ ಅಣಕ ಹಾಗೂ ವ್ಯಂಗ್ಯ. ಸಮಾಜದ ತೊಡಕುಗಳನ್ನು, ವಿಪರ್ಯಾಸಗಳನ್ನು ಎತ್ತಿ ಹಿಡಿದು ಜನ ಸಾಮಾನ್ಯರ ಮುಂದಿಡುವುದು ಕಾರ್ಟೂನಿನ ಕೆಲಸ ಎಂದು ಅಭಿಪ್ರಾಯಪಟ್ಟರು.
ನೀವೇಕೆ ವ್ಯಂಗ್ಯ ಚಿತ್ರ ಬರೆಯುತ್ತೀರಿ ಎಂಬ ಪ್ರಶ್ನೆಗೆ ಆರ್ಕೆಯವರು ಆತ್ಮತೃಪ್ತಿಗೋಸ್ಕರ ಎಂದು ಉತ್ತರಿಸಿದರು. ನಾನು ಕಾರ್ಟೂನು ಬರೆಯುವುದು ನನ್ನ ಆತ್ಮತೃಪ್ತಿಗೋಸ್ಕರ. ಸಂವಹನಕ್ಕಾಗಿಯೇನಲ್ಲ. ಆದರೆ ನಾನು ಬರೆದ ವ್ಯಂಗ್ಯ ಚಿತ್ರಗಳು ಇತರರನ್ನು ತಲುಪಿವೆ. ಮಿಲಿಯಗಟ್ಟಲೆ ಜನರು ವ್ಯಂಗ್ಯಚಿತ್ರದಲ್ಲಿ ಭಾಗಿಯಾಗುವ ಹಾಗಾಗಿದೆ. ಅದಕ್ಕೆ ಸಂತೋಷವಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...