ಜೈವಿಕ ತಂತ್ರಜ್ಞಾನ ಉದ್ಯಮಕ್ಕೆ ನೆರವಾಗಲು ಬಿಟಿ ನಿಧಿ ಸ್ಥಾಪನೆಗೆ ಸರಕಾರ ಅಸ್ತು
ಬೆಂಗಳೂರು: ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಅನುಕೂಲವಾಗುವಂತೆ ಶೋಧನಾ ಬಂಡವಾಳ ನೆರವು ಒದಗಿಸಲು ರಾಜ್ಯ ಸರಕಾರವು ಬಿಟಿ ನಿಧಿಯನ್ನು ಸ್ಥಾಪಿಸಲು ನಿರ್ಧರಿಸಿದೆ.
ಬೆಂಗಳೂರು ಬಯೋ-2002 ಮೇಳದ ಸಮಾರೋಪದಲ್ಲಿ ಭಾಗವಹಿಸಿದ ಮಾಹಿತಿ ತಂತ್ರಜ್ಞಾನ ಸಚಿವ ಬಿ.ಕೆ. ಚಂದ್ರಶೇಖರ್ ಸಮಾರಂಭದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಜೈವಿಕ ತಂತ್ರಜ್ಞಾನ ನಿಧಿಯ ಮೊತ್ತ ಎಷ್ಟಿರಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಜೈವಿಕ ತಂತ್ರಜ್ಞಾನ ಕಂಪೆನಿಗಳನ್ನು ಬೆಂಗಳೂರಿನ ಹೊರವಲಯದಲ್ಲಿ ಆರಂಭಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬಿಟಿ ಪಾರ್ಕ್ನ ಆಡಳಿತಾತ್ಮಕ ಕಾರ್ಯಗಳು ಮುಗಿದಿವೆ. ಸದ್ಯದಲ್ಲೇ ಬಿಟಿ ಪಾರ್ಕ್ ಕಾರ್ಯ ಆರಂಭವಾಗಲಿದೆ ಎಂದ ಸಚಿವರು ಒಟ್ಟು 50 ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಸ್ಥಾಪನೆಯಾಗಲಿದೆ. ಪಾರ್ಕ್ನಲ್ಲಿ ಬಿಟಿ ಉದ್ಯಮಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.
ಬಿಟಿ ನಿಧಿಯೂ ಕೂಡ ಐಟಿ ನಿಧಿಯ ಮಾದರಿಯಲ್ಲಿಯೇ ಇರಬೇಕು ಎಂದು ತೀರ್ಮಾನಿಸಲಾಗಿದೆ. ಬಿಟಿ ಕಂಪನಿಗಳಿಗೆ ಶೋಧನಾ ಬಂಡವಾಳ ಹೂಡುವವರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರತಿವರ್ಷ ಸಭೆ ಕರೆಯಲಾಗುವುದು. ಈ ಸಭೆಗೆ ಭಾರತೀಯ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಮಂಡಳಿಯ (ಸೆಬಿ) ಅಧ್ಯಕ್ಷರನ್ನೂ ಆಹ್ವಾನಿಸಲಾಗುವುದು ಎಂದು ಚಂದ್ರಶೇಖರ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ