ಕಾಗೋಡು ಚಳವಳಿ-50: ಏ. 19ರಂದು ಸಾಗರದಲ್ಲಿ ಚಳವಳಿಗಾರರಿಗೆ ಸನ್ಮಾನ
ಬೆಂಗಳೂರು: ಶಿವಮೊಗ್ಗದ ಕಾಗೋಡು ಹಳ್ಳಿಯಲ್ಲಿ ಗೇಣಿದಾರರ ಹಕ್ಕುಗಳಿಗಾಗಿ ನಡೆದ ಐತಿಹಾಸಿಕ ಕಾಗೋಡು ಸತ್ಯಾಗ್ರಹಕ್ಕೆ ಈ ಬಾರಿ ಸುವರ್ಣೋತ್ಸವ. ಈ ಹಿನ್ನೆಲೆಯಲ್ಲಿ ಏಪ್ರಿಲ್ 19ರಂದು ಸಾಗರ ತಾಲ್ಲೂಕಿನಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಕಾಗೋಡು ಸತ್ಯಾಗ್ರಹವನ್ನು ರೂಪಿಸಿ, ನೇತೃತ್ವ ವಹಿಸಿದ ಎಚ್. ಗಣಪತಿಯಪ್ಪ ಸೇರಿದಂತೆ ಒಟ್ಟು 36 ಮಂದಿ ಸತ್ಯಾಗ್ರಹಿಗಳನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ತಿಮ್ಮಪ್ಪ ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ಮಲೆನಾಡಿನ ಕುಗ್ರಾಮದ ರೈತರು ಭೂಮಾಲಿಕರ ವಿರುದ್ಧ ಬಂಡೆದ್ದು, ಸ್ವಂತ ಭೂಮಿಯ ಫಲ ಉಣ್ಣಲು ಸಹಾಯಕವಾಗಿರುವ ಕಾಗೋಡು ಚಳವಗೆ 50 ವರ್ಷ ತುಂಬಿದೆ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಭೂಮಾಲಿಕರ ದೌರ್ಜನ್ಯಕ್ಕೆ ಈ ಚಳವಳಿ ಅಂತ್ಯ ಹಾಡಿದೆ. ಈ ಸಂದರ್ಭವನ್ನು ನೆನಪಿಸಿಕೊಂಡು ಸಮಾರಂಭವನ್ನು ಆಯೋಜಿಸಲಾಗಿದೆ. ಸಮಾರಂಭದ ವೇದಿಕೆಗೆ ಶಾಂತವೇರಿ ಗೋಪಾಲಗೌಡರ ಹೆಸರಿಟ್ಟರೆ, ಮಂಟಪಕ್ಕೆ ಸಮಾನತೆಯ ಹರಿಕಾರ ಲೋಹಿಯಾ ಅವರ ಹೆಸರಿಡಲಾಗಿದೆ.
ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. 800 ಪುಟಗಳ ಕಾಗೋಡು ಸುವರ್ಣ ಸಂಪುಟ ಪುಸ್ತಕ ಬಿಡುಗಡೆ, ಪುಸ್ತಕದ ಬಗ್ಗೆ ಡಾ. ಯು.ಆರ್. ಅನಂತ ಮೂರ್ತಿ ಅವರಿಂದ ಉಪನ್ಯಾಸ, ಸನ್ಮಾನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...