‘ತಿಪ್ಪಗೊಂಡನ ಹಳ್ಳಿ ಜಲಾಶಯದ ನೀರು ಕುಡಿಯಲು ಯೋಗ್ಯವಲ್ಲ’
ಬೆಂಗಳೂರು : ತಿಪ್ಪಗೊಂಡನ ಹಳ್ಳಿ ಜಲಾಶಯದ ನೀರು ಕಲುಷಿತಗೊಂಡಿದ್ದು,ಬೆಂಗಳೂರು ನಗರಕ್ಕೆ ಸರಬರಾಜಾಗುತ್ತಿರುವ ನೀರಿನ ಗುಣಮಟ್ಟ ಚೆನ್ನಾಗಿಲ್ಲ ಎಂಬ ಆರೋಪವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ವಿಸ್ತುತ ಅಧ್ಯಯನ ಆರಂಭಿಸಲಿದೆ.
ತಿಪ್ಪಗೊಂಡನ ಹಳ್ಳಿ ಜಲಾಶಯದ ಸುತ್ತ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಜಲಾಶಯದಿಂದ ಸಂಗ್ರಹಿಸಿದ ನೀರನ್ನು ಪರೀಕ್ಷಿಸಿದಾಗ, ಇದು ಕುಡಿಯಲು ಅಯೋಗ್ಯವಾಗಿರುವುದು ಕಂಡುಬಂದಿದೆ. ಬ್ಯಾಕ್ಟೀರಿಯಾ ಮತ್ತು ಭೌತ ರಾಸಾಯನಿಕ ತಜ್ಞರು ನೀರಿನ ಗುಣಮಟ್ಟದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಉಪೇಂದ್ರ ತ್ರಿಪಾಠಿ ಹೇಳಿದ್ದಾರೆ.
ಮಂಡಳಿಯು ತನ್ನ ಮುಂದಿನ ವರದಿಯಲ್ಲಿ ತಿಪ್ಪಗೊಂಡನ ಹಳ್ಳಿ ಜಲಾಶಯದ ಸುತ್ತಮುತ್ತಲಿನ ಪ್ರದೇಶವನ್ನು ಕೃಷಿ ಮತ್ತು ಕೈಗಾರಿಕಾ ಮುಕ್ತ ಪ್ರದೇಶ ಎಂದು ಘೋಷಿಸುವಂತೆ ರಾಜ್ಯಸರಕಾರಕ್ಕೆ ಮನವಿ ಮಾಡಿಕೊಳ್ಳಲಿದೆ. ಅಲ್ಲದೆ ಅಗತ್ಯ ಬಿದ್ದಲ್ಲಿ, ಈ ಪ್ರದೇಶವನ್ನು ಅತ್ಯಂತ ಸೂಕ್ಷ್ಮ ಪ್ರದೇಶ ಎಂದೂ ಘೋಷಿಸುವಂತೆ ಸರಕಾರವನ್ನು ಒತ್ತಾಯಿಸಲು ಮಂಡಳಿ ಹಿಂದುಮುಂದು ನೋಡುವುದಿಲ್ಲ ಎಂದು ತ್ರಿಪಾಠಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...