ಕುದುರೆಮುಖ ಕಂಪೆನಿ ಬಗ್ಗೆ ಅಪಪ್ರಚಾರ ಸಲ್ಲದು -ಸುಭಾಷ್ಚಂದ್ರಲಹರಿ
*ಸದಾಶಿವ ಕೆ.
ಮಂಗಳೂರು : ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಸಮಾಜದ ಬಗ್ಗೆ ಸಾಕಷ್ಟು ಕಳಕಳಿಯಿದೆ. ಕೆಲವರು ಕಂಪೆನಿಯ ಮೇಲೆ ಸುಖಾ ಸುಮ್ಮನೇ ಅಪಪ್ರಚಾರ ಮಾಡುತ್ತಾರೆ ಎಂದು ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಭಾಷ್ಚಂದ್ರ ಲಹರಿ ವಿಷಾದಿಸಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕೈಗಾರಿಕೆಗಳು ಮತ್ತು ಸಮಾಜ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ಪರಿಸರವಾದಿಗಳ ಹೆಸರನ್ನು ಉಲ್ಲೇಖಿಸದೆಯೇ, ಕೈಗಾರಿಕೆ ವಿರೋಧಿಗಳನ್ನು ಟೀಕಿಸಿದ ಸುಭಾಷ್ಚಂದ್ರಅವರು, ಉಪನ್ಯಾಸದುದ್ದಕ್ಕೂ ಕೈಗಾರಿಕೆಗಳ ಪರವಾಗಿಯೇ ಮಾತನಾಡಿದರು.
ಕುದುರೆಮುಖ ಗಣಿಗಾರಿಕೆ ಪ್ರದೇಶದಲ್ಲಿ ಹರಿಯುವ ನದಿಗಳ ಬಗ್ಗೆ ಪ್ರಸ್ತಾಪಿಸಿದ ಲಹರಿ, ಕೇವಲ ತುಂಗಾನದಿ ಮಾತ್ರ ಗಣಿಗಾರಿಕೆ ಪ್ರದೇಶದಲ್ಲಿ ಹರಿಯುತ್ತದೆ. ನೇತ್ರಾವತಿ ಮತ್ತು ಭದ್ರಾ ನದಿಗಳು ಗಣಿಗಾರಿಕೆ ಪ್ರದೇಶದಿಂದ ಹೊರಗಿದೆ. ಆದ್ದರಿಂದ ಗಣಿಗಾರಿಕೆಯಿಂದ ನದಿಗಳು ಬತ್ತುತ್ತವೆ ಎಂಬ ಮಾತು ಸುಳ್ಳು ಎಂದರು.
ಗಣಿಗಾರಿಕೆ ನಡೆಸಿದ ನಂತರ...
ಕುದುರೆಮುಖ ಕಂಪೆನಿಯಿಂದಾಗಿಯೇ ನವಮಂಗಳೂರು ಬಂದರು ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಸರಕು ಸಾಗಾಣಿಕೆಯ ಸಿಂಹ ಪಾಲು (67%) ಕೆಐಒಸಿಎಲ್ನದು. ಪರಿಸರ ರಕ್ಷಣೆಯ ಕಡೆಗೂ ಕಂಪೆನಿ ಗಮನ ಹರಿಸುತ್ತಿದೆ. ಈ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದವೇರ್ಪಟ್ಟಿದೆ. ಗಣಿಗಾರಿಕೆ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗಿದೆ. ಗಣಿಗಾರಿಕೆಯ ನಂತರ ಪ್ರದೇಶದ ಅಭಿವೃದ್ಧಿ ಬಗ್ಗೆ ಆಸ್ಟ್ರೇಲಿಯಾದ ಸಂಸ್ಥೆಯಾಂದಿಗೆ ಅಧ್ಯಯನ ನಡೆಸಲಾಗುತ್ತಿದೆ.
ಶಾಲೆ, ಮೂಲಭೂತ ಸೌಕರ್ಯ
ಕಳಸ, ಜಾಂವ್ಲ ಪ್ರದೇಶದಲ್ಲಿ ಕುಡಿಯುವ ನೀರು, ಶಾಲೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಸಂಸ್ಥೆ ಶ್ರಮಿಸುತ್ತಿದೆ. ಗಣಿಗಾರಿಕೆಯಿಂದ ನಿರ್ವಸಿತರಾದವರಿಗೆ, ಮನೆ, ಶಿಕ್ಷಣ ಉದ್ಯೋಗ, ಮನೋರಂಜನಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಅದಾಗ್ಯೂ ಕಂಪೆನಿಯನ್ನು ದೂರುವುದು ಸಲ್ಲ ಎಂದು ಲಹರಿ ಅಭಿಪ್ರಾಯಪಟ್ಟರು.
ಹುಟ್ಟಿನಿಂದ ಲಾಭದಲ್ಲೇ ನಡೆಯುತ್ತಿರುವ ಈ ಸಂಸ್ಥೆಯ ಮೇಲೆ ಅಪಪ್ರಚಾರ ನಡೆಸುತ್ತಿರುವವರು ಕಂಪೆನಿ ಮಾಡಿದ ಒಳ್ಳೆಯ ಕೆಲಸಗಳನ್ನೂ ಗಮನಿಸಬೇಕು ಎಂದು ಸಲಹೆ ಮಾಡಿದರು. ಪರಿಸರ ರಕ್ಷಣೆಗಾಗಿ ಹಲವಾರು ಪ್ರಶಸ್ತಿಗಳನ್ನು ಬಗಲಿಗೇರಿಸಿಕೊಂಡ ಕಂಪೆನಿ ತೆರಿಗೆ, ವಿದ್ಯುತ್ ಶುಲ್ಕಗಳನ್ನು ಕಾಲಕಾಲಕ್ಕೆ ಪಾವತಿ ಮಾಡುತ್ತಿದೆ. ರಾಜ್ಯದಲ್ಲೇ ಪರಿಸರ ರಕ್ಷಣೆಗಾಗಿ ಐಎಸ್ಒ ಪ್ರಮಾಣ ಪತ್ರ ಪಡೆದ ಪ್ರಥಮ ಕಂಪೆನಿ ಎಂಬ ಅಗ್ಗಳಿಕೆಯೂ ಇದೇ ಕಂಪೆನಿಯದು ಎಂದು ಲಹರಿ ಹೇಳಿದರು.
ಭಾರತೀಯ ಸಾರ್ವಜನಿಕ ಸಂಪರ್ಕಗಳ ಮಂಗಳೂರು ಮಣಿಪಾಲ ಘಟಕ ಅಧ್ಯಕ್ಷ ಎನ್. ಎನ್. ಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಜೇಶ ನಾಯಕ್, ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಜನರಲ್ ಮ್ಯಾನೇಜರ್ ಎಂ. ಡಿ. ಪಡಿಯಾರ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕುದುರೆಮುಖ
ಬೆಟ್ಟದಲ್ಲಿ...
ಮುಖಪುಟ
/
ಇವತ್ತು...
ಈ
ಹೊತ್ತು...